ಮೀನುಗಾರರ ಪತ್ತೆಗಾಗಿ ಜಂಟಿ ಕಾರ್ಯಾಚರಣೆ ಮುಂದುವರಿಕೆ: ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್

ಉಡುಪಿ, ಜ.5: ನಾಪತ್ತೆಯಾಗಿರುವ ಎಲ್ಲ ಮೀನುಗಾರರು ಸುರಕ್ಷಿತವಾಗಿ ಸಿಗುವವರೆಗೆ ನಮ್ಮ ಪ್ರಯತ್ನವನ್ನು ಮುಂದುವರಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ತಮ್ಮ ಕಾರ್ಯಾಚರಣೆ ಮುಂದುವರಿಸಲಿವೆ ಎಂದು ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.
ಮಲ್ಪೆಯ ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿರುವ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಕರೆದ ಜನಪ್ರತಿನಿಧಿಗಳು, ಮೀನುಗಾರ ಮುಖಂಡರ, ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.
ದೂರು ದಾಖಲಾದ ದಿನದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೋಧ ಕಾರ್ಯ ನಡೆಸುತ್ತಿವೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಎಲ್ಲ ಪಡೆಯ ಜೊತೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಇದರಲ್ಲಿ ಯಾವುದೇ ರೀತಿಯ ಲೋಪಗಳು ಆಗಿಲ್ಲ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸುವುದು ಬೇಡ ಎಂದು ಅವರು ಹೇಳಿದರು.
ಪ್ರಧಾನಿಯನ್ನು ಭೇಟಿ ಮಾಡಿ: ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಜಿ.ಶಂಕರ್ ಮಾತನಾಡಿ, ಈ ವಿಚಾರವನ್ನು ಇಲ್ಲಿಗೆ ಕೈಬಿಡದೆ ಶೋಧ ಕಾರ್ಯ ವನ್ನು ಇನ್ನಷ್ಟು ತೀವ್ರಗೊಳಿಸಬೇಕು. ಮುಖ್ಯಮಂತ್ರಿಯನ್ನು ಕರೆದುಕೊಂಡು ಹೋಗಿ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿ ಮೀನುಗಾರರನ್ನು ಪತ್ತೆ ಹಚ್ಚಬೇಕು ಎಂದರು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಸುವರ್ಣ ತ್ರಿಭುಜ ಬೋಟಿನವರು ಗಡಿ ದಾಟಿ ಹೋಗಿರುವ ಪರಿಣಾಮ ಗೋವಾ, ಮಹಾರಾಷ್ಟ್ರ ಮೀನುಗಾರರ ಮಧ್ಯೆ ಸಂರ್ಘಷ ಉಂಟಾಗಿ, ಅವರು ಅಪಹರಣ ಮಾಡಿರುವ ಸಂಶಯಗಳು ಕೂಡ ಇವೆ. ಅದೇ ರೀತಿ ಭಯೋತ್ಪಾದನಾ ದಾಳಿಯ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಮುದ್ರದಿಂದ 12 ನಾಟಿಕಲ್ ಮೈಲ್ ದಾಟಿ ಹೋಗುವ ಬೋಟುಗಳನ್ನು ಕಂಡರೆ ಕೋಸ್ಟ್ ಗಾರ್ಡ್ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಮುಟ್ಟು ಗೋಲು ಹಾಕುತ್ತವೆ. ಹೀಗಾಗಿ ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆ ಕಡಿಮೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಹೈದರಾಬಾದ್ನ ಇನ್ವೈಸ್ನಿಂದ ಪ್ರತಿದಿನ ಸಮುದ್ರದಲ್ಲಿ ಮೀನು ಇರುವ ಪ್ರದೇಶಗಳ ಬಗ್ಗೆ ನಮಗೆ ಮಾಹಿತಿ ಬರುತ್ತಿರುತ್ತದೆ. ಅವರ ಮೂಲಕ ಈ ಬೋಟು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಕಾರ್ಯದರ್ಶಿ ಆರ್.ಕೆ.ಗೋಪಾಲ್ ತಿಳಿಸಿದರು. ಈ ಬಗ್ಗೆಯೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಶೋಧ ನಡೆಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಮೀನುಗಾರಿಕಾ ಸಚಿವರೆಲ್ಲಿ ?
ಏಳು ಮಂದಿ ಮೀನುಗಾರರು ಬೋಟು ಸಹಿತ ನಾಪತ್ತೆಯಾಗಿ 22 ದಿನಗಳಾದರೂ ಮೀನುಗಾರಿಕಾ ಸಚಿವರು ಯಾಕೆ ಈವರೆಗೆ ಮಲ್ಪೆಗೆ ಬಂದಿಲ್ಲ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಸಭೆಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲ, ಕಾರ್ಯದ ಒತ್ತಡ ಇರುವುದರಿಂದ ಮೀನುಗಾರ ಸಚಿವರಿಗೆ ಉಡುಪಿಗೆ ಬರಲು ಆಗಿಲ್ಲ. ಅವರು ಜ. 8ರಂದು ಉಡುಪಿಗೆ ಆಗಮಿಸುವುದಾಗಿ ನನ್ನಲ್ಲಿ ಹೇಳಿದ್ದಾರೆ. ಅವರ ಬಗ್ಗೆ ಅನುಮಾನ ಪಡುವುದು ಬೇಡ ಎಂದು ಮನವಿ ಮಾಡಿದರು.
ಉಸ್ತುವಾರಿ ಸಚಿವರ ಬಗ್ಗೆ ಆರೋಪಗಳು ಕೇಳಿ ಬಂದಾಗ ಸ್ಪಷ್ಟನೆ ನೀಡಿದ ಜಯಾಮಾಲ, ಪ್ರಕರಣ ದಾಖಲಾದ ದಿನದಿಂದ ಅದರ ಹಿಂದೆ ಕೆಲಸ ಮಾಡು ತ್ತಿದ್ದೇನೆ. ವೈಯಕ್ತಿಕವಾಗಿ ನನಗೆ ಬರಲು ಆಗಿಲ್ಲ. ಮರಳಿನ ಕುರಿತು ಬೆಂಗಳೂರಿ ನಲ್ಲಿ ಸಭೆ ಇತ್ತು. ಆದರೆ ಈ ಬಗ್ಗೆ ಎಲ್ಲ ರೀತಿಯಲ್ಲಿ ಸ್ಪಂದಿಸುತ್ತಿದ್ದೇನೆ. ಅದು ಬಿಟ್ಟು ನನ್ನ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಸಭೆಯಲ್ಲಿ ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು.ಆರ್.ಸಭಾ ಪತಿ, ಮೊಯ್ದಿನ್ ಬಾವ, ಆಂತರಿಕ ಭದ್ರತೆಯ ಡಿಜಿ ಎ.ಎನ್.ಪ್ರಸಾದ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಎಸ್ಪಿ ಲಕ್ಷ್ಮಣ್ ನಿಂಬರ್ಗಿ, ಕಾರವಾರ ಎಸ್ಪಿ ವಿನಾಯಕ್, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವಾ, ಎಂ.ಎ.ಗಫೂರ್ ಮೊದಲಾದವರು ಉಪಸ್ಥಿತರಿದ್ದರು.
ಮುಷ್ಕರ ಕೈಬಿಡಲು ನಿರಾಕರಣೆ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವಾಗ ಜ.6ರಂದು ಪ್ರತಿಭಟನೆ ನಡೆಸುವುದು ಬೇಡ. ನಮ್ಮ ಮೇಲೆ ವಿಶ್ವಾಸ ಇಡಿ. ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಆದುದರಿಂದ ಪ್ರತಿಭಟನೆ ಯಾರಿಗೋಸ್ಕರ ಮಾಡಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.
ಇದನ್ನು ನಿರಾಕರಿಸಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, 19 ದಿನಗಳವರೆಗೆ ಸರಕಾರ ಯಾವುದೇ ರೀತಿ ಸ್ಪಂದನೆ ಮಾಡದಿ ರುವುದರಿಂದ ನಾವು ಹೋರಾಟಕ್ಕೆ ಇಳಿದಿದ್ದೇವೆ. ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಮೀನುಗಾರರಿಗೆ ಈ ಬಗ್ಗೆ ಮಾಹಿತಿ ನೀಡಲಿ ಎಂದರು.
ಗೃಹ ಸಚಿವರ ಸೂಚನೆಯಂತೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲ ನಾಳಿನ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ಪ್ರತಿಭಟನಾ ಸಭೆಗೆ ತೆರಳಿ ಮನವಿ ಸ್ವೀಕರಿಸುವುದಾಗಿ ಸಭೆಯಲ್ಲಿ ಹೇಳಿದರು.
ಶೀಘ್ರವೇ ಸಚಿವರುಗಳ ಸಭೆ
ಮಲ್ಪೆಯ ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗೋವಾ, ಮಹಾರಾಷ್ಟ್ರ ರಾಜ್ಯಗಳ ಗೃಹ ಸಚಿವರು, ಮೀನುಗಾರಿಕಾ ಸಚಿವರ ಸಭೆಯನ್ನು ಶೀಘ್ರದಲ್ಲೇ ಕರೆದು ಚರ್ಚಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕರ್ನಾಟಕದ ಮೀನುಗಾರರು 12 ನಾಟಿಕಲ್ ಮೈಲ್ ದಾಟಿ ಹೋಗುತ್ತಿರುವುದರಿಂದ ಮಹಾರಾಷ್ಟ್ರ ಮೀನುಗಾರರ ಜೊತೆ ಸಂಘರ್ಷ ನಡೆಯುತ್ತಿರುತ್ತದೆ. ಈ ಘಟನೆಯನ್ನು ಕೂಡ ಆ ದಿಕ್ಕಿನಲ್ಲಿಯೂ ತನಿಖೆ ಮಾಡಬೇಕಾಗುತ್ತದೆ. ಆದುದರಿಂದ ಕೇಂದ್ರ ಸಚಿವರ ಸಹಾಯ ಪಡೆದು ಎರಡು ರಾಜ್ಯಗಳ ಸಚಿವರ ಸಭೆ ನಡೆಸಲಾಗುವುದು ಎಂದರು.







