ಪ್ಯಾನಿಕ್ ಬಟನ್ ಅಳವಡಿಕೆ ಆದೇಶದಿಂದ ಸಂಕಷ್ಟ: ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘ
![ಪ್ಯಾನಿಕ್ ಬಟನ್ ಅಳವಡಿಕೆ ಆದೇಶದಿಂದ ಸಂಕಷ್ಟ: ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘ ಪ್ಯಾನಿಕ್ ಬಟನ್ ಅಳವಡಿಕೆ ಆದೇಶದಿಂದ ಸಂಕಷ್ಟ: ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘ](https://www.varthabharati.in/sites/default/files/images/articles/2019/01/6/171542.jpg)
ಬೆಂಗಳೂರು, ಜ.5: ಪ್ರವಾಸೋದ್ಯಮ ಈಗಾಗಲೇ ಆರ್ಥಿಕ ಕುಸಿತದಿಂದ ಸಂಕಷ್ಟದಲ್ಲಿದ್ದು, ಪ್ರವಾಸಿ ವಾಹನ ಮಾಲಕರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ಯಾನಿಕ್ ಬಟನ್ ಮತ್ತು ಲೊಕೇಷನ್ ಟ್ರಾಕಿಂಗ್ ಯೂನಿಟ್ ಅಳವಡಿಕೆ ಕುರಿತ ಆದೇಶದಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣಗೆ ಪತ್ರ ಬರೆದಿರುವ ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ, ಕೇಂದ್ರ ಸರಕಾರವು ಕಳೆದ ಅಕ್ಟೋಬರ್ 25ರಂದು ವೆಹಿಕಲ್ ಲೊಕೇಶನ್ ಟ್ರಾಕಿಂಗ್(ವಿಎಲ್ಟಿ) ಯೂನಿಟ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕೆಂದು ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೆ ಮುಂದಿಟ್ಟುಕೊಂಡು ರಾಜ್ಯ ಸರಕಾರವು ಕಳೆದ ಡಿ.11ರಂದು ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿ, ರಾಜ್ಯದ ಸಾರ್ವಜನಿಕ ಸೇವಾ ವಾಹನಗಳು ಜ.1ರಿಂದ ಈ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ಇದೀಗ ಜಾರಿಗೆ ತರುತ್ತಿರುವ ವೆಹಿಕಲ್ ಲೊಕೇಶನ್ ಟ್ರಾಕಿಂಗ್ ಯೂನಿಟ್ ಮತ್ತು ಪ್ಯಾನಿಕ್ ಬಟನ್ ಕೂಡ ಇಂತಹ ತರ್ಕಬದ್ಧವಲ್ಲದ ನೀತಿ ನಿಯಮಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಿರ್ಧಾರವನ್ನು ಹಲವು ರಾಜ್ಯಗಳು ಈಗಾಗಲೇ ವಿರೋಧಿಸಿದ್ದರೂ, ನಮ್ಮ ರಾಜ್ಯ ಸರಕಾರ ಮಾತ್ರ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದು ದುರಾದೃಷ್ಟಕರ ಕ್ರಮ. ಜಿಪಿಎಸ್ ತಂತ್ರಜ್ಞಾನವನ್ನು ಶಾಲಾ ವಾಹನಗಳು, ಪ್ರವಾಸಿ ವಾಹನಗಳು ಹಾಗೂ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವ ವಾಹನಗಳು ಅಳವಡಿಸಿಕೊಂಡಿವೆ. ಹೀಗಿರುವಾಗ ಮತ್ತೊಂದು ಲೊಕೇಶನ್ ಉಪಕರಣ ಅಳವಡಿಸಿಕೊಳ್ಳಬೇಕಾದ ಔಚಿತ್ಯವಿಲ್ಲ ಎಂದು ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.
ವಾಹನ ಮಾಲಕರು, ಚಾಲಕರು ಹಾಗೂ ಅಧಿಕಾರಿಗಳಿಗೆ ಉಪಕರಣದ ಕಾರ್ಯನಿರ್ವಹಣೆ, ನಿಷ್ಕ್ರಿಯಗೊಂಡಲ್ಲಿ ಸಕ್ರಿಯಗೊಳಿಸುವ ಅಥವಾ ಅದರ ದುರಸ್ತಿಗೆ ತೆಗೆದುಕೊಳ್ಳಬೇಕಾದ ಕ್ರಮ ಈ ಕುರಿತು ಒಂದು ಕಾರ್ಯಾಗಾರ ಮಾಡುವ ಮೂಲಕ ಅರಿವು ಮೂಡಿಸಿದ ನಂತರ ಜಾರಿಗೊಳಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇಂತಹ ನೂತನ ನೀತಿ-ನಿಯಮಗಳನ್ನು ಜಾರಿಗೊಳಿಸುವ ಮುನ್ನ ಸಂಬಂಧಪಟ್ಟ ಕ್ಷೇತ್ರಗಳ ಪ್ರಮುಖರು, ಸಂಘಟನೆಗಳ ಮುಖ್ಯಸ್ಥರು, ಹಿರಿಯ ತಂತ್ರಜ್ಞರ ಅಭಿಪ್ರಾಯವನ್ನು ಪಡೆದು, ಸೂಕ್ತ ಪೂರ್ವ ಸಿದ್ಧತೆಗಳೊಂದಿಗೆ ಜಾರಿಗೆ ತರಬೇಕಾಗುತ್ತದೆ. ಈ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಸಂಘಟನೆ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.
ಈ ಆದೇಶದ ಪರಿಣಾಮ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾವಿರಾರು ವಾಹನಗಳು ನೋಂದಣಿಯಾಗದೇ ಹಾಗೆಯೇ ನಿಂತಿವೆ. ಆದುದರಿಂದ, ಸರಕಾರ ಮತ್ತೊಮ್ಮೆ ಪರಿಶೀಲಿಸುವ ಮೂಲಕ ತನ್ನ ವಿಶೇಷಾಧಿಕಾರ ಬಳಸಿ ಈ ಆದೇಶವನ್ನು ಮುಂದೂಡಬೇಕೆಂದು ರಾಧಾಕೃಷ್ಣ ಹೊಳ್ಳ ಪತ್ರದಲ್ಲಿ ಮನವಿ ಮಾಡಿದ್ದಾರೆ.