ವರ್ಣ ವಿರಾಸತ್, ಶಿಲ್ಪವಿರಾಸತ್ನ ಸಮಾರೋಪ

ಮೂಡುಬಿದಿರೆ, ಜ. 6: ಕಲಾವಿದರಲ್ಲಿ ಅಭಿವ್ಯಕ್ತಿಯ ಶಕ್ತಿಯಿದೆ. ಸಮಾಜದ ಪ್ರಗತಿಯ ಹಾದಿಯಲ್ಲಿ ಉತ್ತಮ ಅಂಶಗಳ ಸಾರವನ್ನು ಕಲಾವಿದರುಗಳು ಸ್ವೀಕರಿಸಿ ಸತ್ಫಲಗಳನ್ನು ಪ್ರತಿಫಲವಾಗಿ ಸಮಾಜಕ್ಕೆ ನೀಡುವವರಾಗಬೇಕು ಎಂದು ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ನುಡಿದರು.
ಅವರು ರವಿವಾರ ಅಪರಾಹ್ನ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ವಿರಾಸತ್ ಅಂಗವಾಗಿ ಜರಗಿದ ರಾಷ್ಟ್ರೀಯ ಚಿತ್ರಕಲಾವಿದರು ಮತ್ತು ಶಿಲ್ಪ ಕಲಾವಿದರ ಕೂಡುವಿಕೆಯಲ್ಲಿ ನಡೆದ ವರ್ಣ ವಿರಾಸತ್ ಹಾಗೂ ಶಿಲ್ಪವಿರಾಸತ್ನ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ನಮ್ಮಲ್ಲಿ ಸಂಕಲ್ಪದ ಜತೆಗೆ ಶ್ರದ್ಧೆ, ಭಕ್ತಿ ಮತ್ತು ಶಕ್ತಿಯಿದ್ದಾಗ ಸಾಧನೆ ಮೂಡಿಬರಲು ಸಾಧ್ಯ ಎಂದ ಅವರು ಜೀವನ ಶಿಕ್ಷಣ ನೀಡುತ್ತಿರುವ ಆಳ್ವಾಸ್ ದಂತ,ವೈದ್ಯಕೀಯ ಶಿಕ್ಷಣದಲ್ಲೂ ತೊಡಗಿಕೊಂಡು ವಿವಿಮಟ್ಟಕ್ಕೇರುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಕ್ರಾಫ್ಟ್ ಕೌನ್ಸಿಲ್ನ ಕಾರ್ಯದರ್ಶಿ ಎಂ.ಎಸ್. ಫಾರೂಕ್ ಮಾತನಾಡಿ ಶಿಲ್ಪ, ವರ್ಣ ಹೀಗೆ ಬಹುಪ್ರಕಾರದ ಕಲಾವಿದರನ್ನು ಶಿಬಿರದ ಮೂಲಕ ಏಕ ವೇದಿಕೆಗೆ ಕರೆತರುವ ಮೂಲಕ ರಾಷ್ಟ್ರಮಟ್ಟದಲ್ಲಿ ಕಲಾವಿದರುಗಳು ಪ್ರಾಯೋಗಿಕವಾಗಿ ತಮ್ಮ ಅನುಭವ, ಚಿಂತನೆಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿದೆ. ಇತಿಹಾಸವಾಗುತ್ತಿದ್ದ ಸಾಂಪ್ರದಾಯಿಕ ಕಲೆಗಳ ಮೌಲಿಕತೆಯನ್ನು ನಾವು ಅರಿತುಕೊಳ್ಳಬೇಕಾಗಿದೆ. ಅವುಗಳನ್ನು ಅಭಿಮಾನದಿಂದ ಉಳಿಸಿ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ವರ್ಣ ವಿರಾಸತ್ ಪ್ರಶಸ್ತಿ ಪುರಸ್ಕøತರಾಗಲಿರುವ ಹೈದರಾಬಾದಿನ ಹಿರಿಯ ಕಲಾವಿದ ಸೂರ್ಯಪ್ರಕಾಶ್ ಮಾತನಾಡಿ ಚಿತ್ರಕಲಾವಿದರ ಈ ಮಟ್ಟದ ಶಿಬಿರಗಳು ಅಪರೂಪದ ಕೊಡುಗೆ. 50ರ ದಶಕದಲ್ಲಿ ಶ್ರೀನಗರದಲ್ಲಿ ಜಿ.ಆರ್. ಸಂತೋಷ್ ಆರಂಭಿಸಿದ್ದ ಈ ಪ್ರಕ್ರಿಯೆ ಬಳಿಕ ರಾಷ್ಟ್ರೀಯ ಅಕಾಡೆಮಿ ಹಾಗೂ ಕಾರ್ಪೊರೇಟ್ ವಲಯಗಳವರು ಮುಂದುವರೆಸಿದ್ದು ಇದೀಗ ಶಿಕ್ಷಣ ಸಂಸ್ಥೆಗಳು ಈ ಪರಂಪರೆಯನ್ನು ಮುಂದುವರೆಸುತ್ತಿರುವುದು ಸಂತಸ ತಂದಿದೆ. ಎಳೆಯರು ಸಂಸ್ಕೃತಿ ಪ್ರೀತಿಯಿಂದ ಕಲೆಯನ್ನು ಬೆಳೆಸುವ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದವರು ಹೇಳಿದರು.
ಕಲಾವಿದ ಬೆಂಗಳೂರಿನ ಶಶಿಧರ್ ಮಾತನಾಡಿ ಹಿಂದುಳಿದಿರುವ ಪರಂಪರೆಯ ಕಲೆಗಳು, ನೈಸರ್ಗಿಕ ವರ್ಣಗಳ ಕುರಿತ ಅಧ್ಯಯನ ನಡೆಯಬೇಕಾಗಿದೆ. ಕಲೆ ಪರಿಸರ ಸ್ನೇಹಿಯಾಗಬೇಕಿದೆ ಎಂದರು.
ಸಂಘಟಕ, ಡಾ. ಎಂ. ಮೋಹನ ಆಳ್ವ ಮಾತನಾಡಿ ಉತ್ತಮ ಮನಸ್ಸು ಹಾಗೂ ಕನಸಿಗೆ ಶಕ್ತಿ ತುಂಬುವ ಕೆಲಸ ಶಿಕ್ಷಣದ ಮೂಲಕ ನಡೆದಾಗ ಶಿಕ್ಷಣ ಅರ್ಥಪೂರ್ಣವಾಗುತ್ತದೆ. ಶಿಕ್ಷಣದ ಚೌಕಟ್ಟಿನಿಂದ ಹೊರಗುಳಿದರೂ ಕಲಾವಿದರಾಗಿ ಅರ್ಪಣಾ ಮನೋಭಾವದಿಂದ ಸಾಧನೆ ಮಾಡಿದವರು ಎಳೆಯರಿಗೆ ಸ್ಫೂರ್ತಿಯಾಗಬೇಕು ಎನ್ನುವ ಕಾರಣಕ್ಕೆ ವರ್ಣ, ಶಿಲ್ಪ ವಿರಾಸತ್ ನಮ್ಮ ಯುವ ಸಮುದಾಯದ ಮುಂದಿಡಲಾಗಿದೆ ಎಂದರು.
ಇನ್ನೋರ್ವ ಕಲಾವಿದ ಡಾ. ಅಖ್ತರ್ ಹುಸೇನ್, ಶಿಬಿರದ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ವರ್ಣವಿರಾಸತ್ನ 10 ಮಂದಿ , ಶಿಲ್ಪವಿರಾಸತ್ನಲ್ಲಿ ಪಾಲ್ಗೊಂಡ 31 ಕಲಾವಿದರನ್ನು ಪ್ರಮಾಣಪತ್ರ ಸಹಿತ ಗೌರವಿಸಲಾಯಿತು. ವಿದ್ಯಾರ್ಥಿನಿ ದೀಕ್ಷಾ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







