ಶಾಸಕ ಲಿಂಬಾವಳಿಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ
ಪೊಲೀಸ್ ಠಾಣೆ, ಶಾಲೆಗೆ ಮುತ್ತಿಗೆ ಹಾಕಿದ ಪ್ರಕರಣ
![ಶಾಸಕ ಲಿಂಬಾವಳಿಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ ಶಾಸಕ ಲಿಂಬಾವಳಿಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ](https://www.varthabharati.in/sites/default/files/images/articles/2019/01/7/171739.jpg)
ಬೆಂಗಳೂರು, ಜ.7: ಆರು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಇಂದು ಇಬ್ಬರು ಕಾರ್ಪೊರೇಟರ್ ಸೇರಿ 20 ಮಂದಿ ಆರೋಪಿಗಳು ಹಾಜರಾಗುವಂತೆ ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಆದರೆ, ಪ್ರಮುಖ ಅರೋಪಿ ಲಿಂಬಾವಳಿ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಬಿ.ವಿ.ಪಾಟೀಲ್, ಹಾಜರಾದ ಎಲ್ಲ ಅರೋಪಿಗಳ ವಶಕ್ಕೆ ಪಡೆಯಲು ಸೂಚಿಸಿದರು. ಪೊಲೀಸರಿಗೆ ಸೂಚಿಸಿ ಒಂದು ಗಂಟೆಯ ಕಾಲ ಆರೋಪಿಗಳನ್ನು ನ್ಯಾಯಾಧೀಶರು ಕೋರ್ಟ್ನಲ್ಲಿ ಕೂರಿಸಿದರು. ಬಳಿಕ ಕೋರ್ಟ್ಗೆ ಆಗಮಿಸಿದ ಅರೋಪಿಗಳ ಪರ ವಕೀಲ ಶ್ಯಾಂ ಸುಂದರ್, ಕ್ಷಮಿಸಿ, ಪುನಃ ತಪ್ಪುಮರುಕಳಿಸದಂತೆ ಎಲ್ಲ ಅರೋಪಿಗಳು ಹಾಜರಾಗಲಿದ್ದಾರೆ. ಆರೋಪಿಗಳನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸುವಂತೆ ಮನವಿ ಮಾಡಿದ್ದರು. ಈ ವೇಳೆ, ನ್ಯಾಯಾಧೀಶರು ಮುಂದಿನ ವಿಚಾರಣೆಯ ವೇಳೆ ಖುದ್ದು ಲಿಂಬಾವಳಿ ಹಾಜರಾಗಬೇಕೆಂದು ಖಡಕ್ ಸೂಚನೆ ನೀಡಿದರು. ಪ್ರಕರಣದ ವಿಚಾರಣೆಯನ್ನು ಜ.22ಕ್ಕೆ ಮುಂದೂಡಿದರು.
ಪ್ರಕರಣದ ಹಿನ್ನಲೆ: 2017 ಫೆ.25ರಂದು ಪೊಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ, ಪೊಲೀಸರು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ 800 ಮಂದಿ ಕಾರ್ಯಕರ್ತರ ಜೊತೆ ಸೇರಿ ಮುಖಂಡರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನಾಕಾರರ ವಿರುದ್ಧ ಎಚ್ಎಎಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ಶಾಸಕ ಅರವಿಂದ ಲಿಂಬಾವಳಿಗೆ ಕೋರ್ಟ್ ನೋಟಿಸ್ ನೀಡಿತ್ತು.