ಭತ್ತ ಮತ್ತು ಗೋಧಿ ಬೆಳೆದ ರೈತರು ಸಾಯುತ್ತಿದ್ದಾರೆ: ಕೇಂದ್ರ ಸಚಿವ ಗಡ್ಕರಿ
“ದೇಶದ ಅನ್ನದಾತರು ಕೆಟ್ಟ ಸ್ಥಿತಿಯಲ್ಲಿದ್ದಾರೆ”
ಹೊಸದಿಲ್ಲಿ, ಜ.8: “ದೇಶದ ರೈತರು ಕೆಟ್ಟ ಸ್ಥಿತಿಯಲ್ಲಿದ್ದಾರೆ, ಅವರು ಭತ್ತ ಮತ್ತು ಗೋಧಿ ಬೇಸಾಯ ಮಾಡಿ ಸಾಯುತ್ತಿದ್ದಾರೆ. ದೇಶದಲ್ಲಿ ಸಕ್ಕರೆ, ಅಕ್ಕಿ, ಗೋಧಿ ಮತ್ತು ಧಾನ್ಯಗಳು ಹೆಚ್ಚುವರಿ ಇರುವುದರಿಂದ ರೈತರಿಗೆ ಸೂಕ್ತ ಬೆಲೆಗಳು ಈ ಬೆಳೆಗಳಿಂದ ಲಭ್ಯವಾಗುತ್ತಿಲ್ಲ…..” ಹೀಗೆಂದು ದೇಶದ ರೈತರ ಸ್ಥಿತಿಗತಿಗಳನ್ನು ಬಿಚ್ಚಿಟ್ಟವರು ಕೇಂದ್ರ ಸಚಿವ ನಿತಿನ್ ಗಡ್ಕರಿ.
ಕೃಷಿ ಉತ್ಪನ್ನ ಆಧಾರಿತ ಜೈವಿಕ ಇಂಧನ ಉತ್ಪಾದಿಸಲು ರೈತರು ಆದ್ಯತೆ ನೀಡಬೇಕು ಎಂದು ಸೋಮವಾರ ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪೆನಿ ಲಿಮಿಟೆಡ್ ಹಾಗೂ ತೈಲ ಮಾರುಕಟ್ಟೆ ಕಂಪೆನಿಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಅವರು ಹೇಳಿದರು.
ವೇದಿಕೆಯಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಉಪಸ್ಥಿತರಿದ್ದರು.
“ನಮ್ಮ ಮುಂಬೈಯಲ್ಲಿ ಪಾತ್ರೆ ತೊಳೆಯುವ ಬೂದಿಯ ದರ ಕೂಡ ಕೆಜಿಗೆ ರೂ 18 ಆಗಿದ್ದರೆ, ಅಕ್ಕಿಗೆ ಕೆಜಿಗೆ ರೂ 14 ಆಗಿದೆ. ರೈತರ ಪರಿಸ್ಥಿತಿ ಸಂಪೂರ್ಣವಾಗಿ ಕೆಟ್ಟಿದೆ,'' ಎಂದು ಗಡ್ಕರಿ ಹೇಳಿದರು.
ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಗಡ್ಕರಿ “ಪ್ರಧಾನಿ ಸಮಸ್ಯೆ ನಿಭಾಯಿಸಲು ಶ್ರಮ ಪಟ್ಟಿದ್ದಾರೆ ರೈತರಿಗೆ ಉತ್ತಮ ಬೆಲೆ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ'' ಎಂದು ತಿಳಿಸಿದರು.