ಸಾರ್ವತ್ರಿಕ ಮುಷ್ಕರ: ಜೆಸಿಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ

ಉಡುಪಿ, ಡಿ.8: ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ಕಾರ್ಮಿಕರ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ನಡೆದ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅಜ್ಜರಕಾಡಿನ ಎಲ್ಐಸಿ ಕಚೇರಿಯ ಆವರಣದಿಂದ ಹೊರಟ ಕಾರ್ಮಿಕರ ಬೃಹತ್ ಮೆರವಣಿಗೆಯು ಜೋಡುಕಟ್ಟೆ, ಕೆ.ಎಂ.ಮಾರ್ಗ ಮೂಲಕ ಸರ್ವಿಸ್ ಬಸ್ ನಿಲ್ದಾಣದ ಮಹಾತ್ಮ ಗಾಂಧಿ ಪ್ರತಿಮೆ ಸುತ್ತುವರಿದು ಬಿಎಸ್ಎನ್ಎಲ್ ಕಚೇರಿ ರಸ್ತೆಯಾಗಿ ಕಾರ್ಪೋರೇಶನ್ ಬ್ಯಾಂಕಿನ ಕಚೇರಿ ಆವರಣದಲ್ಲಿ ಸಮಾ ಪನಗೊಂಡಿತು.
ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಸಂಚಾಲಕ ಕೆ.ಶಂಕರ್, ಕೇಂದ್ರ ಸರಕಾರಕ್ಕೆ ಜನರ ಬೇಡಿಕೆ, ಮಹತ್ವ, ಸಮಸ್ಯೆಗಳ ಬಗ್ಗೆ ಅರಿವು ಮೂಡಿಲ್ಲ. ಅವರಿಗೆ ಅರಿವು ಮೂಡಿಸುವ ಕೆಲಸ ಈ ರೀತಿಯ ಹೋರಾಟದಿಂದ ಮಾಡಬೇಕಾಗಿದೆ. ಕೇಂದ್ರದ ಕಾರ್ಮಿಕ ಸಂಘಟನೆಗಳ ಬೆಂಬಲದಿಂದ ಈ ಹೋರಾಟ ಯಶಸ್ವಿಯಾಗಿದ್ದು, ನಾಳಿನ ಹೋರಾಟ ಕೂ ಯಶಸ್ವಿ ಮಾಡಬೇಕಾಗಿದೆ ಎಂದರು.
ದೇಶದಲ್ಲಿ ಜೀವಾನಂಶ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿದೆ. ಇದರಿಂದ ಜನಸಾಮಾನ್ಯರು, ಬಡವರು, ಕೃಷಿಕೂಲಿಕಾರರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೀವನ ನಡೆಸುವುದು ಕಷ್ಟ ಎಂಬತಾಗಿದೆ. ರೈತರು ಬೆಳೆಗೆ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜೆಸಿಟಿಯು ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ್ ರೈ, ಎಐಟಿಯುಸಿಯ ಕೆ.ವಿ.ಭಟ್, ಐಎನ್ಟಿಯುಸಿಯ ಗಣೇಶ್ ಕೋಟ್ಯಾನ್, ಎಐಬಿಇಎಯ ರಾಮ್ ಮೋಹನ್, ಬಿಎಸ್ಸೆಎನ್ನೆಲ್ ನೌಕರರ ಯೂನಿಯನ್ನ ಶಶಿಧರ ಗೊಲ್ಲ, ಬಿಇಎಫ್ಐಯ ರವೀಂದ್ರ ಎ., ಎಐಐಇಎಯ ಪ್ರಭಾಕರ ಬಿ.ಕುಂದರ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







