ಬೆಂಗಳೂರು: ಬಂದ್ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಬೆಂಬಲ
ಬಸ್ ನಿಲ್ದಾಣದಲ್ಲಿ ಚಾಪೆ ಹಾಸಿ ಮಲಗಿ ಪ್ರತಿಭಟನೆ
ಬೆಂಗಳೂರು, ಜ.8: ಮೋಟಾರ್ ವಾಹನ ತಿದ್ದುಪಡಿ ಮಸೂದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಬೆಂಬಲ ಸೂಚಿಸಿ, ಮೆಜೆಸ್ಟಿಕ್ನಲ್ಲಿ ಚಾಪೆ ಹಾಸಿಕೊಂಡು ಮಲಗುವ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕಾರ್ಮಿಕ ಸಂಘಟನೆಗಳು ನಮ್ಮ ಬೆಂಬಲ ಕೇಳಿಲ್ಲ. ಆದರೂ ನಾವು ಬೆಂಬಲ ನೀಡಿದ್ದೇವೆ. ಬಂದ್ ಕುರಿತು ಕಾರ್ಮಿಕ ನಾಯಕರು ಕನ್ನಡಪರ ಸಂಘಟನೆಗಳ ಒಕ್ಕೂಟದೊಂದಿಗೆ ಚರ್ಚಿಸಿದ್ದರೆ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಒಟ್ಟಾಗಿ ಕೇಂದ್ರ ಸರಕಾರದ ಅನೀತಿಗಳ ಬಗ್ಗೆ ಜನಜಾಗೃತಿ ಮೂಡಿಸಲು ಸಾಧ್ಯವಾಗುತ್ತಿತ್ತು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಾಗಿನಿಂದಲೂ ಜನತೆ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡುವಂತಾಗಿದೆ. ಜನಪರ ವಾದಂತಹ ಒಂದೇ ಒಂದು ಕಾನೂನನ್ನು ಕೇಂದ್ರ ಸರಕಾರ ತಂದಿಲ್ಲ. ಬದಲಿಗೆ, ಜನಸಾಮಾನ್ಯರಿಗೆ ಪ್ರತಿ ದಿನವೂ ಕಷ್ಟ ಕೊಡುವಂತಹ ರೀತಿಯಲ್ಲಿ ಕಾನೂನನ್ನು ರೂಪಿಸಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯವೆಂದು ಅವರು ಹೇಳಿದರು.