ಕೇಂದ್ರ ಸರಕಾರ ಸರ್ವಾಧಿಕಾರಿ ಸರಕಾರ: ಎಸ್.ವರಲಕ್ಷ್ಮಿ
![ಕೇಂದ್ರ ಸರಕಾರ ಸರ್ವಾಧಿಕಾರಿ ಸರಕಾರ: ಎಸ್.ವರಲಕ್ಷ್ಮಿ ಕೇಂದ್ರ ಸರಕಾರ ಸರ್ವಾಧಿಕಾರಿ ಸರಕಾರ: ಎಸ್.ವರಲಕ್ಷ್ಮಿ](/images/placeholder.jpg)
ಬೆಂಗಳೂರು, ಜ.8: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸುತ್ತಿದೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಹಿಂಜರಿಯುತ್ತಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಆರೋಪಿಸಿದರು.
ಕೇಂದ್ರ ಸರಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೂ ನಡೆದ ಪ್ರತಿಭಟನಾ ರ್ಯಾಲಿಯ ಬಳಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರದ ಅವೈಜ್ಞಾನಿಕ ನೀತಿಗಳಿಂದ ದೇಶದಲ್ಲಿ ಎಲ್ಲಾ ರಂಗಗಳು ದಿವಾಳಿಯಾಗಿವೆ. ಮೋದಿ ಪ್ರಧಾನಿಯಾದ ಬಳಿಕ ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸರಕಾರವು ಕಾರ್ಮಿಕ ಸಂಘಟನೆಗಳು ಮುಂದಿಡುತ್ತಿರುವ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ. ಅಲ್ಲದೆ, ಇದುವರೆಗೂ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚಿಸಲು ಸಭೆ ನಡೆಸಿ ಮಾತುಕತೆಗೆ ಕೇಂದ್ರ ಸರಕಾರ ಮುಂದಾಗಿಲ್ಲ ಎಂದ ಅವರು, ಕಾರ್ಪೊರೇಟ್ ಕಂಪನಿಗಳೊಂದಿಗೆ ದಿನಪೂರ್ತಿ ಕಾಲ ಕಳೆಯುವ ಪ್ರಧಾನಿಗೆ ಕಾರ್ಮಿಕರು ಕಾಣದಿರುವುದು ದುರದೃಷ್ಟಕರ ಎಂದರು.
ನಗರದಲ್ಲಿ ಬಂದ್: ನಗರದ ವೈಟ್ಫೀಲ್ಡ್ ಸೇರಿದಂತೆ ವಿವಿಧೆಡೆ ಇರುವ ಐಟಿ-ಬಿಟಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಂದ್ ಹಿನ್ನೆಲೆಯಲ್ಲಿ ಕಚೇರಿಗಳು ತೆರೆದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾಲ್ಗಳು, ಸಿನಿಮಾ-ಚಿತ್ರಮಂದಿರಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದರೆ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸರಕಾರಿ ನೌಕರರ ಸಂಘ ನೈತಿಕ ಬೆಂಬಲ ವ್ಯಕ್ತಪಡಿಸಿದ್ದವು.
ರಾಜಧಾನಿ ಬೆಂಗಳೂರಿನ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ಗಳು ಕಡಿಮೆ ಇದ್ದು, ಮಾರುಕಟ್ಟೆಗಳು, ತರಕಾರಿ, ಹಣ್ಣು, ದಿನಸಿ ಮಾರುಕಟ್ಟೆಗಳು ತೆರೆದಿದ್ದರೂ, ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು. ಎಪಿಎಂಸಿ ಮಾರುಕಟ್ಟೆ, ರೈತರ ಸಂತೆ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಬೆಂಬಲ: ಪ್ರಾಂತ ರೈತ ಸಂಘ, ಸಿಐಟಿಯು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ಸೂಚಿಸಿ ರಸ್ತೆ ತಡೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಸ್ಎಫ್ಐ, ಎಐಎಸ್ಎಫ್ ವಿದ್ಯಾರ್ಥಿ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಎನ್ಪಿಎಸ್ ರದ್ಧುಗೊಳಿಸಿ, ವಿಭಜಿತ ವಿದ್ಯುತ್ ಸಂಸ್ಥೆಗಳನ್ನು ಏಕೀಕರಣಗೊಳಿಸಲು ಮತ್ತು ಖಾಸಗೀಕರಣ ತಡೆಯಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ಕ.ವಿ.ಪ್ರ.ನಿ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ರಾಜಭವನ ಚಲೋ
ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆ ನೀಡಿರುವ ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಎರಡನೇ ದಿನದಂದು ವಿವಿಧ ಕಾರ್ಮಿಕ ಸಂಘಟನೆಗಳ ಸಾವಿರಾರು ಕಾರ್ಮಿಕರು ನಗರದ ಪುರಭವನದಿಂದ ರಾಜಭನವದವರೆಗೂ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಲಾಗುತ್ತದೆ.
-ಕೆ.ಎನ್.ಉಮೇಶ್, ಸಿಐಟಿಯು ಮುಖಂಡರು
ನಾವು ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಆದರೆ, ನಮ್ಮ ಸಾರಿಗೆ ನೌಕರರಿಗೆ ಹಲವು ಸಮಸ್ಯೆಗಳಿವೆ. ಅವರ ಇಚ್ಛೆಗೆ ವಿರುದ್ಧವಾಗಿ ಹೋಗಲು ನಮಗೆ ಇಷ್ಟವಿಲ್ಲ. ಆದುದರಿಂದಾಗಿ ತಾತ್ಕಾಲಿಕವಾಗಿ ಸಾರಿಗೆ ವ್ಯವಸ್ಥೆ ನಿಲ್ಲಿಸಲು ತಿಳಿಸಿದ್ದೇನೆ. ಸಾಮಾನ್ಯ ಜನರು ಬಸ್ಗಳನ್ನು ನಂಬಿರುತ್ತಾರೆ. ಅವರಿಗೆ ತೊಂದರೆ ಕೊಡಬಾರದು. ಕಾರ್ಮಿಕ ನೀತಿ ಕೇವಲ ಸಾರಿಗೆ ಇಲಾಖೆಯ ನೌಕರರಿಗಷ್ಟೇ ವಿರೋಧಿಯಲ್ಲ. ಕೆಲ ಕಾರ್ಮಿಕ ಇಲಾಖೆಗಳು, ಕಟ್ಟಡ ಕಾರ್ಮಿಕರಿಗೂ ವಿರೋಧ ಇದೆ. ಇದೀಗ ಎಲ್ಲಾ ಕಾರ್ಮಿಕರು ಇಂದು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
-ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ
ಬೇಡಿಕೆಗಳು:
ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೂತನ ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ಕಾರ್ಮಿಕ ವಿರೋಧಿ ಕಾನೂನು ಸುಧಾರಣೆಯನ್ನು ಕೈಬಿಡಬೇಕು. ಕಾರ್ಮಿಕರಿಗೆ ಮಾಸಿಕ ಕನಿಷ್ಟ 18 ಸಾವಿರ ರೂ. ವೇತನ ನೀಡಬೇಕು.
ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಬೇಕು. ಬೆಲೆ ಏರಿಕೆ ತಡೆಗಟ್ಟಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಅಗತ್ಯ ವಸ್ತುಗಳನ್ನು ಒದಗಿಸಬೇಕು. ಕಾರ್ಮಿಕರ ಸಂಘಟನಾ ಹಕ್ಕನ್ನು ಕಸಿದುಕೊಳ್ಳಬಾರದು ಎಂಬುದು ಸೇರಿದಂತೆ 12 ಬೇಡಿಕೆಗಳನ್ನು ಈಡೀರಿಸಲು ಆಗ್ರಹಿಸಲಾಗಿದೆ.