ಅಯೋಧ್ಯೆ ಪ್ರಕರಣ: ಜನವರಿ 10ರಂದು ಐವರು ಸದಸ್ಯರ ಪೀಠದಿಂದ ಆಲಿಕೆ
![ಅಯೋಧ್ಯೆ ಪ್ರಕರಣ: ಜನವರಿ 10ರಂದು ಐವರು ಸದಸ್ಯರ ಪೀಠದಿಂದ ಆಲಿಕೆ ಅಯೋಧ್ಯೆ ಪ್ರಕರಣ: ಜನವರಿ 10ರಂದು ಐವರು ಸದಸ್ಯರ ಪೀಠದಿಂದ ಆಲಿಕೆ](https://www.varthabharati.in/sites/default/files/images/articles/2019/01/8/171908.jpg)
ಹೊಸದಿಲ್ಲಿ, ಜ. 8: ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ದೂರುಗಳ ಗುಚ್ಛವನ್ನು ಜನವರಿ 10ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂ ಕೋರ್ಟ್ನ ಐವರು ಸದಸ್ಯರ ಸಾಂವಿಧಾನಿಕ ಪೀಠ ಜನವರಿ 10ರಂದು ವಿಚಾರಣೆ ನಡೆಸಲಿದೆ. ಪೀಠದಲ್ಲಿ ಇರುವ ಇತರ ನಾಲ್ವರು ಸದಸ್ಯರೆಂದರೆ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಎನ್.ವಿ. ರಮಣ, ಯು.ಯು. ಲಲಿತ್ ಹಾಗೂ ಡಿ.ವೈ. ಚಂದ್ರಚೂಡ.
ಈ ಹಿಂದೆ ಮುಖ್ಯ ನ್ಯಾಯಮೂರ್ತಿ ಗೊಗೋಯಿ ಹಾಗೂ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನು ಒಳಗೊಂಡ ಪೀಠ ಈ ದೂರುಗಳ ವಿಚಾರಣೆ ನಡೆಸಿತ್ತು. ನ್ಯಾಯಾಲಯ ಜನವರಿ 4ರಂದು ಈ ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತ್ತು ಹಾಗೂ ಈ ವಿಷಯದ ಕುರಿತು ಮುಂದಿನ ಆದೇಶವನ್ನು ಸೂಕ್ತ ಪೀಠ ಆದೇಶಿಸಲಿದೆ ಎಂದು ಹೇಳಿತ್ತು. ಪ್ರಕರಣದ ಶೀಘ್ರ ವಿಚಾರಣೆ ನಡೆಸುವಂತೆ ಆಗ್ರಹಿಸಿ ಈ ಹಿಂದೆ ಉತ್ತರಪ್ರದೇಶ ಸರಕಾರ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಅಲಹಾಬಾದ್ ಉಚ್ಚ ನ್ಯಾಯಾಲಯ 2010ರಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ 14 ಪ್ರತ್ಯೇಕ ಮೇಲ್ಮನವಿ ಸಲ್ಲಿಕೆಯಾಗಿದ್ದವು.