ಮಂಡ್ಯದಲ್ಲಿ ಕಾರ್ಮಿಕರ ಮುಷ್ಕರಕ್ಕೆ ವ್ಯಕ್ತವಾಗದ ಬೆಂಬಲ: ಬಂದ್ ವಿಫಲ
ಮಂಡ್ಯ,ಜ.9: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸುರಕ್ಷತೆ ಹಿಂಪಡೆಯುವುದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ 2ನೇ ದಿನದ ಭಾರತ್ ಬಂದ್ ಮಂಡ್ಯ ಜಿಲ್ಲೆಯಲ್ಲಿ ವಿಫಲವಾಯಿತು.
ಮಂಡ್ಯ ನಗರದ ಪೇಟಿ ಬೀದಿ, ಜೈನರ ಬೀದಿ, ವಿವಿ ರಸ್ತೆ, ಆರ್.ಪಿ ರಸ್ತೆ, ಗುತ್ತಲು ರಸ್ತೆ, ನೂರಡಿ ರಸ್ತೆ ಸೇರಿದಂತೆ ನಗರ ಮತ್ತು ಜಿಲ್ಲಾದ್ಯಂತ ಎಲ್ಲ ವರ್ಗದ ವ್ಯಾಪಾರಿಗಳು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಎಂದಿನಂತೆ ತೆರೆದು ವ್ಯಾಪಾರ ನಡೆಸಿದರು.
ಸಾರಿಗೆ ಬಸ್ ಸಂಚಾರ: ಭಾರತ್ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರವನ್ನು ರದ್ದುಗೊಳಿಸಿ, ನಂತರ ನಿಧಾನವಾಗಿ ಸಂಚಾರ ಆರಂಭಿಸಲಾಯಿತು. ಆದರೆ ಬುಧವಾರ ಮಾತ್ರ ಸಂಚಾರ ಎಂದಿನಂತಿದ್ದರೂ, ಬಸ್ಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂತು.
ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: 2ನೇ ದಿನದ ಭಾರತ್ ಬಂದ್ ಇದ್ದರೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿರಲಿಲ್ಲ. ಎಂದಿನಂತೆ ಶಾಲಾ-ಕಾಲೇಜುಗಳು ನಡೆದವಾದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದುದು ಕಂಡುಬಂತು.
ಉಳಿದಂತೆ ಚಿತ್ರಮಂದಿರಗಳು, ಪೆಟ್ರೋಲ್ ಬಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಂಚೆ ಕಚೇರಿ, ಬ್ಯಾಂಕ್ಗಳು ಬಂದ್ಗೆ ಬೆಂಬಲ ನೀಡಿದ್ದರಿಂದಾಗಿ ಬ್ಯಾಂಕ್ಗಳು ಮುಚ್ಚಲ್ಪಟ್ಟಿದ್ದರು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಬಿಗಿ ಬಂದೋಬಸ್ತ್:
ಭಾರತ್ ಬಂದ್ ಕಾರಣ ನಗರ ಸೇರಿದಂತೆ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಗುತ್ತಲು ರಸ್ತೆ, ಮಹಾವೀರ ವೃತ್ತ, ಜೆ.ಸಿ. ವೃತ್ತ, ಹೊಳಲು ವೃತ್ತ ಸೇರಿದಂತೆ ಹಲವು ಆಯಕಟ್ಟಿನ ವೃತ್ತ ಮತ್ತು ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.







