ಸಾಮಾನ್ಯ ವರ್ಗದವರಿಗೆ ಮೀಸಲು: ಸಚಿವ ಆರ್.ವಿ.ದೇಶಪಾಂಡೆ ಸ್ವಾಗತ
ಬೆಂಗಳೂರು, ಜ.10: ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗಗಳ ಬಡವರಿಗೆ ಶೇಕಡ 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ತೀರ್ಮಾನಿಸಿರುವುದನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉದ್ದೇಶಿತ ಮೀಸಲನ್ನು ಜಾರಿಗೆ ತರಲು ತಿದ್ದುಪಡಿ ಮಸೂದೆ ಮಂಡಿಸಿ, ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆದಿರುವುದು ಸ್ವಾಗತಾರ್ಹವಾದುದಾಗಿದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಯಾವುದೇ ಬಗೆಯ ಮೀಸಲು ಸೌಲಭ್ಯಕ್ಕೆ ಒಳಪಡದಿರುವಂತಹ ವರ್ಗಗಳ ಬಡವರಿಗೆ ಅನುಕೂಲವಾಗಲಿದೆ. ವಾರ್ಷಿಕ ಆದಾಯ 8 ಲಕ್ಷ ರೂ. ಮೀರದೆ ಇರುವಂಥವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಇದರಿಂದ ಮೀಸಲಾತಿ ಸಿಗಲಿದ್ದು, ಸಾಕಷ್ಟು ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಶೇಕಡ 10ರಷ್ಟು ಮೀಸಲಿನಿಂದ ಒಟ್ಟು ಮೀಸಲಾತಿ ಪ್ರಮಾಣ ಶೇಕಡ 50ರಿಂದ 60ಕ್ಕೆ ಏರಲಿದೆ ಎಂದು ದೇಶಪಾಂಡೆ ಅಭಿಪ್ರಾಯ ಪಟ್ಟಿದ್ದಾರೆ.
Next Story