ಮಕ್ಕಳ ವಚನ ಮೇಳದಿಂದ ಸ್ವಸ್ಥ ಸಮಾಜದ ನಿರ್ಮಾಣ: ಗೊ.ರು.ಚನ್ನಬಸಪ್ಪ
ಬೆಂಗಳೂರು, ಜ.10: ಕಲುಷಿತವಾಗುತ್ತಿರುವ ಸಮಾಜದಲ್ಲಿ ಮುಂದಿನ ಪೀಳಿಗೆಗೆ ಸಂಸ್ಕೃತಿಯ ಅರಿವನ್ನು ಮಾಡಿಕೊಟ್ಟು, ಸತ್ಯ, ನಿಷ್ಠೆ, ಪ್ರಾಮಾಣಿಕತೆಗಳನ್ನು ಮಕ್ಕಳ ವಚನ ಮೇಳ ಕಟ್ಟಿಕೊಡುತ್ತಿದ್ದು, ಇದರಿಂದ ಸ್ವಸ್ಥ ಸಮಾಜದ ನಿರ್ಮಾಣವಾಗಲಿಯೆಂದು ಖ್ಯಾತ ಜಾನಪದ ವಿದ್ವಾಂಸರಾದ ಗೊ.ರು.ಚನ್ನಬಸಪ್ಪ ಆಶಿಸಿದರು.
ಗುರುವಾರ ವಚನ ಜ್ಯೋತಿ ಬಳಗವು ಕಲಾಗ್ರಾಮದಲ್ಲಿ ಆಯೋಜಿಸಿದ್ದ ಮಕ್ಕಳ ವಚನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಐದು ಸಾವಿರಕ್ಕೂ ಹೆಚ್ಚು ಮಕ್ಕಳು ಕಲಾಗ್ರಾಮದಲ್ಲಿ ಸೇರಿ ವಚನಗಳನ್ನು ಹಾಡುತ್ತಿರುವುದು ಮುಂದಿನ ದಿನಗಳಲ್ಲಿ ಒಳ್ಳೆಯ ಸಮಾಜ ನಿರ್ಮಾಣದ ಕನಸನ್ನು ಬಿತ್ತುವಂತಾಗಿದೆ. ಇದು ನಿಜಕ್ಕೂ ಸಮಾಜದ ಬಗೆಗೆ ಕಾಳಜಿಯುಳ್ಳ ಕಾರ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಾದಿ ಶರಣರು ಜಾತ್ಯತೀತ ಲಿಂಗ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದರು. ಕಾಯಕಕ್ಕೆ ಪ್ರಾಧಾನ್ಯತೆಯನ್ನು ತಂದರು. ಅನುಭವಮಂಟಪದಲ್ಲಿ ಎಲ್ಲರೂ ಸೇರಿ ಮುಕ್ತವಾಗಿ ಅನುಭಾವವನ್ನು ಮಾಡಿದರು. ಅವರ ಬದುಕಿನಲ್ಲಿ ಕಂಡುಕೊಂಡ ಅನುಭವಗಳು ವಚನಗಳ ಮೂಲಕ ಅನಾವರಣಗೊಂಡವು. ಅಂತಹ ಅನರ್ಘ್ಯರತ್ನಗಳಾದ ವಚನಗಳನ್ನು ಪಸರಿಸುವ ಕೆಲಸದಲ್ಲಿ ಮಕ್ಕಳ ವಚನ ಮೇಳ ಕಾರ್ಯಕ್ರಮ ಅರ್ಥಪೂರ್ಣವಾದುದೆಂದು ಅವರು ಶ್ಲಾಘಿಸಿದರು.
ವಚನ ಜ್ಯೋತಿ ಬಳಗದ ಅಧ್ಯಕ್ಷರಾದ ಎಸ್.ಪಿನಾಕಪಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ವಚನ ಸಂಸ್ಕೃತಿಯನ್ನು ತಲುಪಿಸುವುದರ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಪರಿಚಯಿಸಲಾಗುತ್ತಿದೆ. ವಚನ ಪ್ರಕಾರದ ಹನ್ನೆರಡು ಸ್ಪರ್ಧೆಗಳಲ್ಲಿ ಅಂಗನವಾಡಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ವಚನ ಹಾಡು ಬರೆಯುವ, ನೃತ್ಯ ಮಾಡುವ, ಚಿತ್ರ ಬಿಡಿಸುವ, ವಚನಕಾರರ ವೇಷಭೂಷಣಧಾರಿಗಳಾಗಿ ನಲಿಯುವ ಮೂರು ದಿನಗಳ ಕಾರ್ಯಕ್ರಮ ಇದಾಗಿದೆಯೆಂದು ತಿಳಿಸಿದರು.
ಈ ವೇಳೆ ಕನ್ನಡ ಪ್ರಾಧ್ಯಾಪಕ ಡಾ.ರುದ್ರೇಶ್ ಅದರಂಗಿಯವರನ್ನು ಸನ್ಮಾನಿಸಲಾಯಿತು. ವಚನಜ್ಯೋತಿ ಬಳಗವು ಕಲಾಗ್ರಾಮದಲ್ಲಿ ಆಯೋಜಿಸಿದ್ದ ಮಕ್ಕಳ ವಚನ ಮೇಳದಲ್ಲಿ ಪೂಜ್ಯ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ ಪ್ರಶಂಸಾಪತ್ರ ವಿತರಿಸಿದರು. ಕವಯತ್ರಿ ಸೌಮ್ಯಾ ಗೌಡ, ಗಾಯಕಿಯರಾದ ಜಾನಕಿ ಮೀನಾಕ್ಷಿ ಉಪಸ್ಥಿತರಿದ್ದರು.







