ಸಿಬಿಐ ನಿರ್ದೇಶಕರಾಗಿ ಎಂ.ನಾಗೇಶ್ವರ್ ರಾವ್ ಅಧಿಕಾರ ಸ್ವೀಕಾರ
ಹೊಸದಿಲ್ಲಿ, ಜ.11: ಸಿಬಿಐ ನಿರ್ದೇಶಕರಾಗಿ ಎಂ. ನಾಗೇಶ್ವರ್ ರಾವ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಹೆಚ್ಚುವರಿ ನಿರ್ದೇಶಕರಾಗಿದ್ದ ನಾಗೇಶ್ವರ್ ರಾವ್ ಅವರನ್ನು ಅಲೋಕ್ ವರ್ಮಾ ವರ್ಗಾವಣೆಯಿಂದ ತೆರವಾಗಿದ್ದ ಸಿಬಿಐ ನಿರ್ದೇಶಕರಾಗಿ ಕೇಂದ್ರ ಸರಕಾರ ನೇಮಕಗೊಳಿಸಿದೆ.
ಅಲೋಕ್ ವರ್ಮಾ ಅವರನ್ನು ಗುರುವಾರ ಅಗ್ನಿಶಾಮಕ ದಳ. ಗೃಹರಕ್ಷಕ ದಳ ಮತ್ತು ಸಿವಿಲ್ ಡಿಫೆನ್ಸ್ ಡಿ .ಜಿ. ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.
1986ರ ಒಡಿಶಾ ಕೇಡರ್ ನ ಐಪಿಎಸ್ ಅಧಿಕಾರಿ ನಾಗೇಶ್ವರ್ ರಾವ್ ಅವರು ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ಕಳೆದ ಅಕ್ಟೋಬರ್ ನಲ್ಲಿ ರಜೆಯಲ್ಲಿ ಕಳಿಸಿದಾಗ ಸಿಬಿಐನ ಹಂಗಾಮಿ ನಿರ್ದೇಶಕರಾಗಿದ್ದರು.
ಕಳೆದ ವರ್ಷದ ಅಕ್ಟೋಬರ್ 23ರಂದು ಮಧ್ಯರಾತ್ರಿ ಕೇಂದ್ರ ಸರಕಾರದಿಂದ ಕಡ್ಡಾಯ ರಜೆ ಮೇಲೆ ಕಳುಹಿಸಲ್ಪಟ್ಟಿದ್ದ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ 77 ದಿನಗಳ ಬಳಿಕ ತಮ್ಮ ಕಚೇರಿಗೆ ಬುಧವಾರ ಹಾಜರಾಗಿದ್ದರು.
ಸುಪ್ರೀಂಕೋರ್ಟ್ ಮಂಗಳವಾರ ನೀಡಿದ್ದ ಮಹತ್ವದ ಆದೇಶದಲ್ಲಿ ಕಡ್ಡಾಯ ರಜೆ ಮೇಲೆ ಸಿಬಿಐ ನಿರ್ದೇಶಕರನ್ನು ಕಳುಹಿಸಿದ್ದ ಕೇಂದ್ರ ಸರಕಾರದ ಆದೇಶವನ್ನು ವಜಾಗೊಳಿಸಿತ್ತು. ವರ್ಮಾ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು.