1 ಕೋಟಿ ಲಂಚಕ್ಕೆ ಬೇಡಿಕೆ ಆರೋಪ: ಸಿಸಿಬಿ ಎಸ್ಐ, ಮುಖ್ಯಪೇದೆ ಅಮಾನತು

ಬೆಂಗಳೂರು, ಜ.12: ಜನರಿಗೆ ಮೋಸ ಮಾಡಿದ್ದ ಕಂಪೆನಿ ಬಳಿ 1 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಸಿಸಿಬಿ ಎಸ್ಐ, ಮುಖ್ಯ ಪೇದೆಯನ್ನು ಸೇವೆಯಿಂದ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಸಿಸಿಬಿಯ ಸಂಘಟಿತ ಅಪರಾಧ ದಳದ(ಓಸಿಡ್ಲ್ಯೂ) ಎಸ್ಐ ಪ್ರಕಾಶ್, ಮುಖ್ಯಪೇದೆ ಸತೀಶ್ ಎಂಬುವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ತಿಂಗಳಿಗೆ ಅಧಿಕ ಲಾಭಾಂಶ ನೀಡುವುದಾಗಿ ಸಾರ್ವಜನಿಕರಿಂದ ಸುಮಾರು 65 ಕೋಟಿ ಹೂಡಿಕೆ ಮಾಡಿಸಿಕೊಂಡಿದ್ದ ಜಯನಗರದಲ್ಲಿ ಕಚೇರಿ ಹೊಂದಿದ್ದ ಎಐಎಂಎಂಎಸ್ ಕಂಪೆನಿ ಸಾವಿರಾರು ಮಂದಿಗೆ ವಂಚನೆ ನಡೆಸಿತ್ತು.
ಈ ಸಂಬಂಧ ಬಂದ ದೂರುಗಳಿಂದ ಮಾಹಿತಿ ಪಡೆದು ವಿಚಾರಣೆ ನೆಪದಲ್ಲಿ ಎಐಎಂಎಂಎಸ್ ಕಂಪೆನಿಯವರ ಬಳಿ ಎಸ್ಐ ಪ್ರಕಾಶ್, ಮುಖ್ಯಪೇದೆ ಸತೀಶ್ 1 ಕೋಟಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 35 ಲಕ್ಷ ಹಣ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯತೆ ಪರಿಶೀಲಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದ್ದರಿಂದ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.





