ಯುವ ಸಮುದಾಯದಿಂದ ದೇಶದ ಅಭಿವೃದ್ಧಿ ಸಾಧ್ಯ: ಅಣ್ಣಾ ಹಜಾರೆ

ಬೆಂಗಳೂರು, ಜ.12: ಸ್ವಾಮಿ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆಯಿತ್ತು. ಭಾರತವನ್ನು ಯುವ ಸಮುದಾಯದ ಶಕ್ತಿಯಿಂದಲೇ ಬದಲಾವಣೆ ಮಾಡಲು ಸಾಧ್ಯ ಎಂದು ನಂಬಿದ್ದರು. ಹೀಗಾಗಿ, ಯುವಕರು ಮನಸ್ಸು ಮಾಡಿದರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೋರಾಟಗಾರ ಹಾಗೂ ಗಾಂಧೀವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.
ವಿವೇಕಾನಂದರ ದಿನಾಚರಣೆಯ ಅಂಗವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ವಿದ್ಯಾರ್ಥಿಗಳು ಹಾಗೂ ಥಿಂಕ್ ಇಂಡಿಯಾದಿಂದ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾಷಣಗಳಿಂದ ದೇಶ ಅಭಿವೃದ್ಧಿಯಾಗುವುದಿಲ್ಲ. ಭಾಷಣದ ಜತೆಗೆ ಕೆಲಸವನ್ನೂ ಮಾಡಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯ ಕಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯುವಕರು ಗಾಂಧೀ ಹಾಗೂ ವಿವೇಕಾನಂದರ ಆದರ್ಶಗಳನ್ನು ಪಾಲಿಸಿದರೆ ದೇಶ ಅಭಿವೃದ್ಧಿ ಸಾಧ್ಯ. ಒಳ್ಳೆಯದನ್ನು ಮಾಡದಿದ್ದರೂ ಪರವಾಗಿಲ್ಲ, ಕೆಟ್ಟದ್ದನ್ನು ಮಾಡಬೇಡಿ ಎಂದು ಸಲಹೆ ನೀಡಿದ ಅವರು, ಇದುವರೆಗೂ ನನಗೂ ವಿವೇಕಾನಂದರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಕೆಲಸಗಳನ್ನು ಹೇಗೆ ಮಾಡಬೇಕೆಂದು ಅವರು ತಿಳಿಸಿದ್ದರು. ಅದನ್ನು ಚೆನ್ನಾಗಿ ಅರಿತಿದ್ದೇನೆ ಎಂದರು.
ನಾನು ಇಪ್ಪತ್ತೈದನೇ ವರ್ಷಕ್ಕೆ ಗಾಂಧೀ, ವಿವೇಕಾನಂದರ ವಿಚಾರಗಳಿಂದ ಪ್ರಭಾವಿತನಾಗಿ ಸಮಾಜ ಸೇವೆ ಆರಂಭ ಮಾಡಿದೆ. ಕೋಟ್ಯಂತರ ರೂ.ಗಳನ್ನು ಸಮಾಜ ಸೇವೆಗಾಗಿ ಟ್ರಸ್ಟ್ ಮೂಲಕ ನಿಯೋಗಿಸಿದೆ. ಸಂಸಾರವನ್ನು ಕಟ್ಟಿಕೊಳ್ಳದೇ ಸಮಾಜಕ್ಕೆ ಬ್ರಹ್ಮಚಾರಿಯಾಗಿಯೇ ಉಳಿದುಬಿಟ್ಟೆ ಎಂದ ಅವರು, ನನ್ನ ಕುಟುಂಬವನ್ನು ಭೇಟಿಯಾಗಿ ವರ್ಷಗಳೇ ಕಳೆದುಹೋಗಿವೆ. ನನ್ನ ತಮ್ಮಂದಿರ ಮಕ್ಕಳ ಹೆಸರೇ ನನಗೆ ಗೊತ್ತಿಲ್ಲ ಎಂದು ಹೇಳಿದರು. ಥಿಂಕ್ ಇಂಡಿಯಾ ಸಲಹೆಗಾರ ಸುನೀಲ್ ಅಂಬೇಘರ್ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶದ ಅಭಿವೃದ್ಧಿಗೆ ಅಡಚಣೆಯಾಗಿಲ್ಲ. ಜನಸಂಖ್ಯೆ ಹೆಚ್ಚಿದಷ್ಟು ಮಾನವ ಶಕ್ತಿ ಹೆಚ್ಚಲಿದೆ. ಈ ಶಕ್ತಿ ಸದ್ಭಳಕೆಯಾದರೆ ದೇಶ ಅಭಿವೃದ್ಧಿ ಕಾಣಲಿದೆ ಎಂದರು.
ದೇಶದ ಉದ್ಯೋಗದ ವಿನ್ಯಾಸ ಬದಲಾಗಬೇಕು. ದೇಶ, ನಿರುದ್ಯೋಗ ಸಮಸ್ಯೆಗಳಿಗೆ ಡಿಜಿಟಲ್ ಮಧ್ಯ ಪ್ರವೇಶಕ್ಕಿಂತಲೂ ಮಾನವ ಸಂಪನ್ಮೂಲದ ಮಧ್ಯ ಪ್ರವೇಶ ಮಾಡಬೇಕು. ವಿದ್ಯಾರ್ಥಿಗಳು ಹಳ್ಳಿಗೆ ತೆರಳಿ ಗ್ರಾಮೀಣ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಗ್ರಾಮಗಳ ಸ್ಥಿತಿಗತಿಗಳನ್ನು ಬದಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನಮ್ಮಲ್ಲಿ ಲಭ್ಯವಿರುವ ಶೇ.100 ರಷ್ಟು ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಂಡರೆ ದೇಶ ವಿಶ್ವದಲ್ಲೇ ಮುಂದುವರಿಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ನಿರ್ದೇಶಕ ರುದ್ರ ಪ್ರತಾಪ್, ಮಾತಾ ವಿವೇಕಾಮಯಿ, ವಿವೇಕ್ ಶರ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಸಿದವರ ಹೊಟ್ಟೆ ತುಂಬಿಸಬೇಕು
ಗ್ರಾಮಗಳ ಅರ್ಥ ವ್ಯವಸ್ಥೆ ಸುಧಾರಿಸದ ಹೊರತು ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದ ಅವರು, ದೇಶದ ಶೇ. 80 ರಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಹಸಿವಿನಿಂದ ಬಳಲುವವನಿಗೆ ಅನ್ನ ಮುಖ್ಯವೇ ಹೊರತು ವಿಚಾರ ಮುಖ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹಸಿದ ಹೊಟ್ಟೆ ತುಂಬಿಸುವ ಕಡೆಗೆ ಆಳುವ ಸರಕಾರಗಳು ಗಮನ ನೀಡಬೇಕು.
-ಅಣ್ಣಾ ಹಜಾರೆ, ಹೋರಾಟಗಾರ ಹಾಗೂ ಪದ್ಮಶ್ರೀ ಪುರಸ್ಕೃತರು







