ತನ್ನನ್ನು ‘ಡಕಾಯಿತ’ ಎಂದ ಪ್ರಾಂಶುಪಾಲನಿಗೆ ಮಧ್ಯಪ್ರದೇಶ ಸಿಎಂ ಮಾಡಿದ್ದೇನು?
![ತನ್ನನ್ನು ‘ಡಕಾಯಿತ’ ಎಂದ ಪ್ರಾಂಶುಪಾಲನಿಗೆ ಮಧ್ಯಪ್ರದೇಶ ಸಿಎಂ ಮಾಡಿದ್ದೇನು? ತನ್ನನ್ನು ‘ಡಕಾಯಿತ’ ಎಂದ ಪ್ರಾಂಶುಪಾಲನಿಗೆ ಮಧ್ಯಪ್ರದೇಶ ಸಿಎಂ ಮಾಡಿದ್ದೇನು?](https://www.varthabharati.in/sites/default/files/images/articles/2019/01/13/172592.jpg)
ಭೋಪಾಲ್, ಜ.13: ತಮ್ಮನ್ನು ಡಕಾಯಿತ ಎಂದು ಕರೆದ ಶಾಲಾ ಪ್ರಾಚಾರ್ಯರೊಬ್ಬರನ್ನು ಅಮಾನತು ಮಾಡಿದ ಜಿಲ್ಲಾಡಳಿತದ ನಿರ್ಧಾರವನ್ನು ಮುಖ್ಯಮಂತ್ರಿ ಕಮಲ್ ನಾಥ್ ರದ್ದುಪಡಿಸಿದ್ದಾರೆ.
ಜಬಲ್ಪುರ ಜಿಲ್ಲಾಧಿಕಾರಿ ಚಾವಿ ಭಾರದ್ವಾಜ್ ಅವರು ಕನಿಷತ್ ಬುನಿಯಾದಿ ಮಾಧ್ಯಮಿಕ ಶಾಲೆಯ ಪ್ರಾಚಾರ್ಯ ಮುಕೇಶ್ ತಿವಾರಿ ಎಂಬಾತನನ್ನು ಅಮಾನತು ಮಾಡಿದ್ದರು. ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.
ತಿವಾರಿಯವರ ಭಾಷಣ ಕುರಿತ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಭಾಷಣದಲ್ಲಿ ತಿವಾರಿ, ಹಿಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ನಮ್ಮವರು ಹಾಗೂ ಕಮಲ್ ನಾಥ್ ಡಕಾಯಿತ ಎಂದು ಹೇಳಿದ್ದರು. ಈ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ದೂರಿನ ಆಧಾರದಲ್ಲಿ ನಾಗರಿಕ ಸೇವಾ ನಿಯಮಾವಳಿ ಅನ್ವಯ ಭಾರದ್ವಾಜ್, ಈ ಶಿಕ್ಷಕನನ್ನು ಅಮಾನತು ಮಾಡಿದ್ದರು.
ಆದರೆ ತಾನು ಸದಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ಹೇಳಿಕೆ ನೀಡಿ ಈ ಅಮಾನತು ರದ್ದುಪಡಿಸಿದರು. ಅವರ ಅನುಮಾನವನ್ನು ನಿಯಮಾನುಸಾರ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಆದರೆ ವೈಯಕ್ತಿಕ ಮಟ್ಟದಲ್ಲಿ, ಆತನಿಗೆ ನಾನು ಕ್ಷಮೆ ನೀಡುತ್ತೇನೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. "ಒಬ್ಬ ಶಿಕ್ಷಕನ ನಿಜವಾದ ಕೆಲಸ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು. ಭವಿಷ್ಯದಲ್ಲಿ ಆತ ತನ್ನ ಕರ್ತವ್ಯದ ಬಗ್ಗೆ ಗಮನ ಹರಿಸುತ್ತಾನೆ ಎಂಬ ಆಶಯ ನನ್ನದು" ಎಂದು ಕಮಲ್ ನಾಥ್ ಹೇಳಿದ್ದಾರೆ.