ಮೇಲ್ಜಾತಿಯವರಿಗೆ ಮೀಸಲಾತಿ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಚಿಂತನೆ: ಇಂದ್ರಾ ಸಾಹ್ನಿ
ಹೊಸದಿಲ್ಲಿ, ಜ.13: ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ನ್ಯಾಯವಾದಿ ಇಂದ್ರಾ ಸಾಹ್ನಿ ತಿಳಿಸಿದ್ದಾರೆ.
ಈ ಹಿಂದೆ ಸಾಹ್ನಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯು ಮೀಸಲಾತಿಯ ಮಿತಿಯನ್ನು ಶೇ.50ಕ್ಕೆ ಸೀಮಿತಗೊಳಿಸುವ ಮಂಡಲ್ ತೀರ್ಪಿಗೆ ದಾರಿ ಮಾಡಿಕೊಟ್ಟಿದೆ. ಇದೀಗ ಸಂಸತ್ತು ಅಂಗೀಕರಿಸಿರುವ ಬಿಜೆಪಿಯ ಕರಡು ಮಸೂದೆ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಸಾಹ್ನಿ ತಿಳಿಸಿದ್ದಾರೆ. ಇದನ್ನು ವಿರೋಧಿಸಿ ಈಗಾಗಲೇ ಕೆಲವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ತನ್ನನ್ನು ಸಂಪರ್ಕಿಸಿ ಮೇಲ್ಮನವಿ ಸಲ್ಲಿಸುವಂತೆ ಕೇಳಿದ್ದಾರೆ. ಈ ಬಗ್ಗೆ ಚಿಂತನೆ ನಡೆಸುತ್ತಿದ್ದು ಶೀಘ್ರ ನಿರ್ಧಾರಕ್ಕೆ ಬರುವುದಾಗಿ ಸಾಹ್ನಿ ತಿಳಿಸಿದ್ದಾರೆ.
ಮಸೂದೆಯು ಸಂವಿಧಾನದ 14ನೇ ಪರಿಚ್ಛೇದ(ಕಾನೂನಿನ ಎದುರು ಸಮಾನತೆ) ಹಾಗೂ 15ನೇ ಪರಿಚ್ಛೇದ(ಧರ್ಮ, ಜಾತಿ, ಲಿಂಗ, ಹುಟ್ಟಿದ ಸ್ಥಳ, ಜನಾಂಗದ ಆಧಾರದಲ್ಲಿ ತಾರತಮ್ಯ ತೋರುವುದಕ್ಕೆ ನಿಷೇಧ)ದ ಉಲ್ಲಂಘನೆಯಾಗಿದೆ. ಒಬಿಸಿ, ಎಸ್ಸಿ, ಎಸ್ಟಿಗಳನ್ನು ಈ ಮೀಸಲಾತಿಯಿಂದ ಹೊರಗಿರಿಸಲಾಗಿದೆ. ಆದ್ದರಿಂದ ಇದು ಪಕ್ಷಪಾತದ ಮಸೂದೆಯಾಗಿದೆ. ಆರ್ಥಿಕ ಅಶಕ್ತರ ವಿಭಾಗದಲ್ಲಿ ಯಾರೆಲ್ಲಾ ಬರುತ್ತಾರೆ ಎಂದು ಮಸೂದೆ ವಿವರಿಸಿಲ್ಲ. ಇದನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಟ್ಟಿದ್ದಾರೆ. ಅಲ್ಲದೆ ಯಾವ ಆಧಾರದಲ್ಲಿ ನಿರ್ಧರಿಸಿದ್ದು ಎಂದು ಆಯಾ ರಾಜ್ಯಗಳು ವಿವರಿಸಬೇಕೆಂದು ತಿಳಿಸಲಾಗಿದೆ ಎಂದು ಸಾಹ್ನಿ ಹೇಳಿದ್ದಾರೆ.
1992ರಲ್ಲಿ ಆಗಿನ ಪ್ರಧಾನಿ ನರಸಿಂಹ ರಾವ್ ಅವರ ಮೀಸಲಾತಿ ನಿರ್ಧಾರವನ್ನು ಪ್ರಶ್ನಿಸಿ ಸಾಹ್ನಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ , ನ್ಯಾಯಾಲಯ ಕೆಲವೊಂದು ನಿರ್ಬಂಧಗಳನ್ನು ವಿಧಿಸಿತ್ತು ಹಾಗೂ ಕೇವಲ ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ ಒದಗಿಸಲಾಗದು ಎಂದು ಸೂಚಿಸಿತ್ತು.