ಪ.ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್
![ಪ.ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್ ಪ.ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್](https://www.varthabharati.in/sites/default/files/images/articles/2019/01/15/172952.jpeg)
ಹೊಸದಿಲ್ಲಿ,ಜ.15: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ರಥಯಾತ್ರೆಗೆ ಅನುಮತಿ ನೀಡಲು ಮಂಗಳವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು,ರಾಜ್ಯ ಸರಕಾರವು ವ್ಯಕ್ತಪಡಿಸಿರುವ ಆತಂಕಗಳಿಗೆ ಯಾವುದೇ ಬುನಾದಿಯಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿತು.
ಬಿಜೆಪಿಯು ರಾಜ್ಯ ಸರಕಾರವು ಎತ್ತಿರುವ ಕಳವಳಗಳನ್ನು ನಿವಾರಿಸಬೇಕು ಮತ್ತು ರಥಯಾತ್ರೆಗೆ ಅನುಮತಿಯನ್ನು ಕೋರಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು ಸ್ಪಷ್ಟ ಪಡಿಸಿತು. ಆದರೆ ಪ.ಬಂಗಾಳ ಬಿಜೆಪಿ ಘಟಕವು ರಾಜ್ಯದಲ್ಲಿ ರ್ಯಾಲಿಗಳು ಮತ್ತು ಸಭೆಗಳನ್ನು ನಡೆಸಬಹುದು ಎಂದು ಅದು ತಿಳಿಸಿತು.
ರಥಯಾತ್ರೆಯು ಕೋಮುಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗಲಿದೆ ಹಾಗೂ ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ಪ.ಬಂಗಾಳ ಸರಕಾರವು,ರ್ಯಾಲಿಗಳು ಕೋಮು ಧ್ರುವೀಕರಣಕ್ಕೆ ಕಾರಣವಾಗಲಿವೆ ಎಂಬ ಗುಪ್ತಚರ ವರದಿಗಳನ್ನೂ ಉಲ್ಲೇಖಿಸಿತ್ತು.
ಮೆರವಣಿಗೆಗೆ ಅವಕಾಶ ನೀಡಿದ್ದ ಏಕ ನ್ಯಾಯಾಧೀಶ ಪೀಠದ ಆದೇಶವನ್ನು ತಳ್ಳಿಹಾಕಿದ್ದ ಕೊಲ್ಕತ್ತಾ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಡಿ.21ರ ತೀರ್ಪನ್ನು ಪ್ರಶ್ನಿಸಿ ರಾಜ್ಯ ಬಿಜೆಪಿ ಘಟಕವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಬಿಜೆಪಿಯು ಪ.ಬಂಗಾಳದಲ್ಲಿ ಮೂರು ಜಿಲ್ಲೆಗಳಿಂದ ರಥಯಾತ್ರೆಯನ್ನು ಆರಂಭಿಸಲು ಉದ್ದೇಶಿಸಿತ್ತು ಮತ್ತು ಇವುಗಳಿಗೆ ಪಕ್ಷಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದರು.