ಸರಕಾರ ರಚನೆ ಮಾಡಲು ಬಿಜೆಪಿ ಬಳಿ ಸಂಖ್ಯಾಬಲವೇ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ
![ಸರಕಾರ ರಚನೆ ಮಾಡಲು ಬಿಜೆಪಿ ಬಳಿ ಸಂಖ್ಯಾಬಲವೇ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಸರಕಾರ ರಚನೆ ಮಾಡಲು ಬಿಜೆಪಿ ಬಳಿ ಸಂಖ್ಯಾಬಲವೇ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ](https://www.varthabharati.in/sites/default/files/images/articles/2019/01/15/172966.jpeg)
ಬೆಂಗಳೂರು, ಜ.15: ಸರಕಾರ ರಚನೆ ಮಾಡುವುದಕ್ಕೆ ಬಿಜೆಪಿ ಬಳಿ ಸಂಖ್ಯಾಬಲವೇ ಇಲ್ಲ. ಆದರೂ, ತೋಳ ಬಂತು ತೋಳ ಎಂಬಂತೆ ಕತೆ ಹೇಳಿಕೊಂಡು ಎಲ್ಲರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಮಂಗಳವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರ ಹಿಡಿಯಲು ಅಸಂವಿಧಾನಿಕವಾಗಿ ಪ್ರಯತ್ನ ಪಡುತ್ತಿರುವುದು ಇದು ಮೊದಲ ಬಾರಿ ಅಲ್ಲ ಎಂದರು.
ಸರಕಾರ ಪತನಗೊಳಿಸಲು ಕನಿಷ್ಠ 12ರಿಂದ 15 ಮಂದಿ ಶಾಸಕರು ಬೇಕು. ಅಷ್ಟು ಸಂಖ್ಯಾಬಲ ಬಿಜೆಪಿಯವರ ಬಳಿ ಇಲ್ಲ. ಮೂರ್ನಾಲ್ಕು ಮಂದಿ ಬಿಜೆಪಿಯವರ ಜತೆ ಹೋಗಿರಬಹುದು. ಅಷ್ಟರಿಂದಲೇ ಸರಕಾರ ಕೆಡವಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪ್ರಯತ್ನ ಪಡುತ್ತಲೇ ಇದ್ದಾರೆ ಎಂದ ಅವರು, ಶಾಸಕರನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ. ಅವರೇನು ಕುರಿಗಳಲ್ಲ. ಎರಡೂವರೆ ಲಕ್ಷ ಜನರಿಂದ ಮತ ಪಡೆದು ಚುನಾಯಿತರಾದ ಜವಾಬ್ದಾರಿಯುತ ಪ್ರತಿನಿಧಿಗಳು. ಅವರಿಗೆ ಸ್ವಂತ ವಿಚೇಚನೆ ಇದೆ ಎಂದರು.