ಕೇಂದ್ರ ಸರಕಾರವನ್ನು ಪ್ರಶ್ನಿಸಲು ‘ಟೀಮ್ ಇಂಡಿಯಾ’ ಪರಿಕಲ್ಪನೆ: ಮುನೀರ್ ಕಾಟಿಪಳ್ಳ

ಮಂಗಳೂರು, ಜ.16: ಕೇಂದ್ರ ಸರಕಾರವನ್ನು ಪ್ರಶ್ನಿಸಲು ‘ಟೀಮ್ ಇಂಡಿಯಾ’ ಪರಿಕಲ್ಪನೆ ರೂಪಿಸಲಾಗಿದೆ ಎಂದು ಟೀಮ್ ಇಂಡಿಯಾದ ಮುಖಂಡ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಮೋದಿ ಪರಿವಾರಕ್ಕೆ ನೆನಪಿಸಬೇಕಿದೆ. ಉದ್ಯೋಗ, ಕಪ್ಪು ಹಣ ತರುವ ವಿಷಯ, ಹೆಚ್ಚಿದ ಶ್ರೀಮಂತರ ಸಂಪತ್ತು, ಅಭದ್ರತೆಯ ಬದುಕಿಗೆ ತಳ್ಳಲ್ಪಟ್ಟ ಕಾರ್ಮಿಕರ, ರೈತರ, ಯುವಜನರ ಸಂಕಟಗಳಿಗೆ ಕಾರಣವಾದ ಅವರ ಆಡಳಿತ ನೀತಿಯನ್ನು ಸೋಲಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಕುರಿತು ಹೇಳಿಕೆಯಲ್ಲಿ ಮಾಹಿತಿ ನೀಡಿರುವ ಮುನೀರ್ ಕಾಟಿಪಳ್ಳ, ಮತ್ತೊಮ್ಮೆ ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಅದು ಭಾರತದ ಭವಿಷ್ಯವನ್ನು ಮತ್ತಷ್ಟು ಕಠಿಣಗೊಳಿಸಲಿದೆ. ಪ್ರಜಾಪ್ರಭುತ್ವ, ಸಂವಿಧಾನ ಅಪಾಯಕ್ಕೆ ಸಿಲುಕಲಿದೆ ಎಂದರು.
ಮತ್ತೊಂದು ಮಹಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ದುಡಿಯುವ ಕೈಗೆ ಉದ್ಯೋಗ, ನಿರುದ್ಯೋಗ ನಿವಾರಣೆ, ಕಪ್ಪು ಹಣದ ವಾಪಸಾತಿ, ಭ್ರಷ್ಟಾಚಾರ ನಿರ್ಮೂಲನೆ, ಸ್ವಾವಲಂಬನೆ ಮುಂತಾದ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಮೈತ್ರಿಕೂಟದ ಸರಕಾರ ಎಲ್ಲ ರಂಗಗಳಲ್ಲೂ ದಯನೀಯ ವೈಫಲ್ಯ ಕಂಡಿದೆ. ವಿವೇಚನಾ ರಹಿತವಾದ ನೋಟ್ ಬ್ಯಾನ್ನಂತಹ ನಿರ್ಧಾರಗಳು, ಕಾರ್ಪೊರೇಟ್ ಶ್ರೀಮಂತರ ಪರವಾದ ನೀತಿಗಳು ದೇಶದಲ್ಲಿ ಹಸಿವಿನ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ದೂರಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ನಿರ್ಮಾಣ, ಕಪ್ಪುಹಣ ವಾಪಸಾತಿಯಂತಹ ಭರವಸೆಗಳು ಪೂರ್ಣಪ್ರಮಾಣದಲ್ಲಿ ಸುಳ್ಳಾಗಿವೆ. ಬದಲಿಗೆ ನಿರುದ್ಯೋಗ, ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ. ಈ ಎಲ್ಲ ಮಾತು ತಪ್ಪಿದ ಆಡಳಿತದಿಂದ ಜನಸಾಮಾನ್ಯರು ಬದುಕುವ ದಾರಿ ಕಾಣದೆ ಪರಿತಪಿಸುತ್ತಿದ್ದಾರೆ. ಜನತೆಯ ಈ ಅತೃಪ್ತಿಯಿಂದ ಅವರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಮತ್ತದರ ಪರಿವಾರ ಜನತೆಯ ನಡುವೆ ಭಾವನಾತ್ಮಕ, ವಿಭಜನಕಾರಿ ವಿಷಯಗಳನ್ನು ಬಿತ್ತಿ ದೇಶದಲ್ಲಿ ಆತಂಕದ ವಾತಾವರಣ ಮೂಡಿಸುತ್ತಿದೆ. ಧರ್ಮ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ, ಆ ಮೂಲಕ ನಿರ್ಮಾಣವಾಗುವ ಉನ್ಮಾದದ ಮರೆಯಲ್ಲಿ ಮತ್ತೊಮ್ಮೆ ಗೆದ್ದು ಬರಲು ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಮತ್ತದರ ಪರಿವಾರದ ಈ ನಕಾರಾತ್ಮಕ ರಾಜಕಾರಣ ಯಶಸ್ಸು ಸಾಧಿಸಿದರೆ ದೇಶ ಬಹುದೊಡ್ಡ ಅಪಾಯಕ್ಕೆ ತಲೆಕೊಡಬೇಕಾಗುತ್ತದೆ. ಭಾರತದ ಬಹುತ್ವ, ಜಾತ್ಯಾತೀತ, ಒಕ್ಕೂಟ ವ್ಯವಸ್ಥೆಯ ಮೇಲೆ ಯಾವ ನಂಬಿಕೆಯನ್ನೂ ಹೊಂದದ ಈ ಶಕ್ತಿಗಳು ಮತ್ತೊಮ್ಮೆ ಗೆದ್ದು ಬಂದರೆ ಅಪಾರ ತ್ಯಾಗ ಬಲಿದಾನದಿಂದ ಕಟ್ಟಲ್ಪಟ್ಟಿರುವ ದೇಶದ ವ್ಯವಸ್ಥೆ ದೊಡ್ಡ ಪ್ರಹಾರಕ್ಕೆ ಒಳಗಾಗುತ್ತದೆ. ಪ್ರಜಾಪ್ರಭುತ್ವದ ಮೇಲೆ ಕಿಂಚಿತ್ತು ನಂಬಿಕೆಯನ್ನೂ ಹೊಂದದ ನರೇಂದ್ರ ಮೋದಿ ಪರಿವಾರದ ಆಡಳಿತದಲ್ಲಿ ಲಾಭ ಪಡೆದದ್ದು ಅಂಬಾನಿ, ಅದಾನಿ, ಮಿತ್ತಲ್ನಂತಹ ದೊಡ್ಡ ಶ್ರೀಮಂತರು ಮಾತ್ರ. ಅಂತಹವರ ಪರವಾಗಿಯೆ ಆಡಳಿತ ನಡೆಸಲಾಯಿತು ಎಂದು ತಿಳಿಸಿದರು.
‘ಟೀಮ್ ಇಂಡಿಯಾ’ ಉದ್ದೇಶ
ಈಗ ಮತ್ತೊಮ್ಮೆ ಚುನಾವಣೆ ಎದುರಾಗಿದ್ದು, ಜನತೆಯನ್ನು ಎಚ್ಚರಿಸಲು, ಚುನಾವಣೆಯ ಸಂದರ್ಭದಲ್ಲಿ ಜಾಗೃತಿ ಮೂಡಿಸಲು, ಯುವ ಜನತೆಯ, ರೈತರ, ಕಾರ್ಮಿಕರ, ಮಹಿಳೆಯರ ಬೇಡಿಕೆಗಳನ್ನು ಮುಖ್ಯ ವಿಷಯವಾಗಿಸಲು ದೇಶದ ಭವಿಷ್ಯದ ಕುರಿತು ಕಾಳಜಿಯುಳ್ಳ ಸಮಾನ ಮನಸ್ಕ ದೇಶಪ್ರೇಮಿ ಯುವಜನರು ಸೇರಿ ‘ದೇಶಕ್ಕಾಗಿ ನಾವು’ ಎಂಬ ಘೋಷಣೆಯೊಂದಿಗೆ ‘ಟೀಮ್ ಇಂಡಿಯಾ’ ಎಂಬ ವೇದಿಕೆಯನ್ನು ಕಟ್ಟಿಕೊಂಡಿದ್ದೇವೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.
ಸಾಮಾಜಿಕ ಜಾಲತಾಣ ಹಾಗೂ ಅದರ ಹೊರಗಡೆಯೂ ವಿವಿಧ ಕಾರ್ಯಕ್ರಮಗಳ ಮೂಲಕ ಈ ತಂಡ ಕಾರ್ಯಾಚರಿಸುತ್ತದೆ. ಸುಳ್ಳುಗಳನ್ನು ಬಯಲು ಗೊಳಿಸುವುದು, ಸತ್ಯವನ್ನು ಪ್ರಚುರ ಪಡಿಸುವುದು, ವಾಸ್ತವವನ್ನು ಜನರ ಮುಂದಿಡುವುದು ಈ ತಂಡದ ಕಾರ್ಯಯೋಜನೆ. ಸರ್ವಾಧಿಕಾರಿ, ಮತೀಯವಾದಿ, ಕಾರ್ಪೊರೇಟ್ ಉದ್ಯಮಿಗಳ ಪರವಾದ ನರೇಂದ್ರ ಮೋದಿ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ಉದ್ದೇಶ. ದೇಶದ ಪ್ರಜಾಪ್ರಭುತ್ವ, ಜಾತ್ಯತೀತವನ್ನು ರಕ್ಷಿಸುವುದು, ಜನತೆಯ ಸಂವಿಧಾನ ಬದ್ಧ ಹಕ್ಕುಗಳನ್ನು ಎತ್ತಿ ಹಿಡಿಯುವುದು ವೇದಿಕೆಯ ಗುರಿಯಾಗಿದೆ ಎಂದು ಅವರು ತಿಳಿಸಿದರು.








