ಪ್ರಖರ ಹಿಂದುತ್ವವಾದಿಯಾಗಿರುವ ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಶಾಸಕ ಸುಕುಮಾರ್ ಶೆಟ್ಟಿ
ಉಡುಪಿ, ಜ.19: ನಾನೊಬ್ಬ ಪ್ರಖರ ಹಿಂದುತ್ವವಾದಿಯಾಗಿರುವುದರಿಂದ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಗುರುಗಾಂವ್ ರೆಸಾರ್ಟ್ನಿಂದ ವಾರದ ನಂತರ ಇಂದು ಉಡುಪಿಗೆ ಆಗಮಿಸಿದ ಇವರು, ಬಿಜೆಪಿ ತೊರೆಯುವ ವಿಚಾರದ ಕುರಿತ ಮಾಧ್ಯಮದ ವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಸನ್ಯಾಸಿ ಜೀವನ ನಡೆಸುವ ನನಗೆ ಹಣ, ಅಧಿಕಾರ ಆಮಿಷದ ಅಗತ್ಯವಿಲ್ಲ. ಆಸ್ಕರ್ ಫೆರ್ನಾಂಡಿಸ್ರನ್ನು ನೋಡಿ 18 ವರ್ಷ ಆಗಿದೆ. ತಿಂಗಳ ಹಿಂದೆ ಯು.ಟಿ.ಖಾದರ್ ಪರಿಚಯ ಆಗಿದೆ. ನನ್ನನ್ನು ಕಾಂಗ್ರೆಸಿಗರು ಯಾರು ಕೂಡ ಸಂಪರ್ಕ ಮಾಡಿಯೇ ಇಲ್ಲ. ನಾನು ಯಡಿಯೂರಪ್ಪ ಅವರ ಅತೀ ಹತ್ತಿರದ ವ್ಯಕ್ತಿ ಎಂದು ಅವರು ಹೇಳಿದರು.
ಬಿ.ಎಸ್.ಯಡಿಯೂರಪ್ಪಚಮತ್ಕಾರ ಎಂಬಂತೆ ಒಂದು ತಿಂಗಳೊಳಗೆ ಮುಖ್ಯಮಂತ್ರಿ ಆಗುತ್ತಾರೆ. ಅವರು ಹೇಗೆ ಮ್ಯಾಜಿಕ್ ಮಾಡುತ್ತಾರೆ ಎಂದು ನಾವು ಈಗ ಹೇಳುವುದಿಲ್ಲ. ಹರಿಯಾಣದಲ್ಲಿ ನಾನು ಮೋಜು ಮಸ್ತಿ ಮಾಡಿಲ್ಲ. ಬಿಜೆಪಿ ಸಭೆಯನ್ನು ಮುಗಿಸಿ ಹರಿದ್ವಾರಕ್ಕೆ ಹೋಗಿ, ಅಲ್ಲಿ ನಡುಗುವ ಚಳಿಯಲ್ಲಿ ಗಂಗಾ ಸ್ನಾನ ಮಾಡಿದ್ದೇನೆ. ನನ್ನ ಕ್ಷೇತ್ರ ಹಾಗೂ ಜನರನ್ನು ಮರೆಯುವ ಪ್ರಶ್ನೆಯೇ ಇಲ್ಲ. ನನ್ನನ್ನು ಕೂಡಿ ಹಾಕಲು ನಾನು ಮಗು ಅಲ್ಲ ಎಂದು ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.