ಬಿಜೆಪಿ ಶಾಸಕರು ರೆಸಾರ್ಟ್ ಬಿಟ್ಟರೆ ನಾವು ಬಿಡ್ತೀವಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ಬೆಂಗಳೂರು, ಜ. 19: ‘ಆಪರೇಷನ್ ಕಮಲದ ಭೀತಿಯಿಂದಲೇ ನಮ್ಮ ಪಕ್ಷದ ಶಾಸಕರನ್ನು ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ಇರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹರಿಯಾಣದ ಗುರುಗ್ರಾಮದಿಂದ ಬಿಜೆಪಿ ಶಾಸಕರನ್ನು ಅವರು ಬಿಡುಗಡೆ ಮಾಡಿದರೆ, ನಮ್ಮ ಶಾಸಕರನ್ನು ರೆಸಾರ್ಟ್ನಿಂದ ತಮ್ಮ ಕ್ಷೇತ್ರಗಳಿಗೆ ಕಳುಹಿಸುತ್ತೇವೆ ಎಂದು ಹೇಳಿದರು.
ರೆಸಾರ್ಟ್ನಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಏನೂ ಕರೆದಿಲ್ಲ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಪರಸ್ಪರ ಚರ್ಚೆ, ಸಂವಾದ ನಡೆಸಲಿದ್ದು, ಶಾಸಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
ಈಗಲ್ಟನ್ ರೆಸಾರ್ಟ್ನಲ್ಲಿ ಕೊಠಡಿಗಳ ಕೊರತೆ ಹಿನ್ನೆಲೆಯಲ್ಲಿ ವಂಡಲಾನಲ್ಲಿ ಕೆಲ ಶಾಸಕರನ್ನು ಇರಿಸಲಾಗಿತ್ತು. ಇಂದು ಅವರೆಲ್ಲನ್ನೂ ಈಗಲ್ಟನ್ ರೆಸಾರ್ಟ್ಗೆ ಕರೆತರಲಾಗಿದೆ ಎಂದ ಅವರು, ರಾಜ್ಯದಲ್ಲಿನ ಬರ ಪರಿಹಾರಕ್ಕೆ ಸರಕಾರ ಅಗತ್ಯ ಕ್ರಮ ವಹಿಸಿದೆ ಎಂದರು.
ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಶಾಸಕರಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಅವರಿಂದ ವಿವರಣೆ ಕೋರಲಾಗಿದೆ. ವಿವರಣೆ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾ ಕೈಗೊಳ್ಳಲಾಗುವುದು ಎಂದರು.