ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಬಹಿರಂಗ: ಆರ್.ಅಶೋಕ್
ಶಾಸಕರ ಹೊಡೆದಾಟ ಪ್ರಕರಣ
ಬೆಂಗಳೂರು, ಜ. 20: ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕರು ಪರಸ್ಪರ ಹೊಡೆದಾಡಿಕೊಂಡಿದ್ದು, ರಾಜ್ಯದ ಮಾರ್ಯಾದೆಯನ್ನು ಹರಾಜು ಹಾಕಿದ್ದಾರೆ. ಆ ಮೂಲಕ ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಬಹಿರಂಗಗೊಂಡಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ದೂರಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮದ್ಯಪಾನದ ಹಾವಳಿ ತಪ್ಪಿಸಬೇಕಾದ ಜನಪ್ರತಿನಿಧಿಗಳೇ ಅಡ್ಡದಾರಿ ಹಿಡಿದಿದ್ದು, ಶಾಸಕರೇ ಕುಡಿದು ಹೊಡೆದಾಟ ಮಾಡಿಕೊಂಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಶಾಸಕ ಆನಂದ್ ಸಿಂಗ್ ಅವರ ಹೊಟ್ಟೆ ಮತ್ತು ತಲೆಗೆ ಪೆಟ್ಟು ತಗುಲಿದೆ. ಇದನ್ನು ಮರೆಮಾಚಲು ಯತ್ನಿಸುತ್ತಿದ್ದು, ಘಟನೆಯನ್ನು ಮುಚ್ಚಿ ಹಾಕಲು ಹುನ್ನಾರ ನಡೆಸಿದೆ ಎಂದು ದೂರಿದ ಅವರು, ಆನಂದ್ ಸಿಂಗ್ ಸ್ಥಿತಿಯ ಬಗ್ಗೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ನೋಡಲು ಬಿಡುತ್ತಿಲ್ಲ: ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ತಡರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕ ರಾಜುಗೌಡ ಆರೋಪಿಸಿದ್ದಾರೆ.
ಆನಂದ್ ಸಿಂಗ್ ನನ್ನ ಸ್ನೇಹಿತ. ಮಾಧ್ಯಮಗಳಲ್ಲಿ ಸುದ್ದಿ ತಿಳಿದು ಆತನನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದೆ. ಆದರೆ, ನನಗೆ ಅವರನ್ನು ನೋಡಲು ಅವಕಾಶ ನೀಡಿಲ್ಲ. ಹೀಗಾಗಿ ನಿರಾಸೆಯಿಂದಲೇ ಹೊರಬಂದಿದ್ದೇನೆ ಎಂದು ರಾಜುಗೌಡ ತಿಳಿಸಿದರು.