ಸಿದ್ಧಗಂಗಾ ಶ್ರೀ ನಿಧನಕ್ಕೆ ಬಿಎಸ್ವೈ ಕಂಬನಿ
ಫೈಲ್ ಚಿತ್ರ
ಬೆಂಗಳೂರು, ಜ.21: ತ್ರಿವಿದ ದಾಸೋಹಿ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿರುವುದು ಸಮಸ್ತ ಜನತೆಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.
ತಮ್ಮ ಬದುಕಿನುದ್ದಕ್ಕೂ ಸೇವಾಕಾರ್ಯದಲ್ಲಿ ತೊಡಗಿಕೊಂಡು, ಶಿಕ್ಷಣ, ಸಾಮಾಜಿಕ ಕಾರ್ಯಗಳಲ್ಲಿ ಅಪಾರ ಸಾಧನೆ ಮಾಡಿದವರು ಶ್ರೀಗಳು. ಅಸಂಖ್ಯಾತ ಭಕ್ತರಿಗೆ ಪ್ರೇರಣೆ ನೀಡಿ, ತಮ್ಮ ಆತ್ಮಶಕ್ತಿಯಿಂದಲೇ 111 ವರ್ಷಗಳ ಸಾರ್ಥಕ ಬದುಕು ನಡೆಸಿದವರು ಎಂದು ಅವರು ತಿಳಿಸಿದ್ದಾರೆ.
ಸದಾ ಜನರೊಂದಿಗೆ ಬೆರೆತು, ಭಕ್ತರ ಬಾಳಿಗೆ ದಿಕ್ಕು ತೋರಿದ ಮಹಾನ್ ಸಂತರಾಗಿದ್ದ ಶಿವಕುಮಾರ ಸ್ವಾಮೀಜಿ ಅವರ ದೇಹತ್ಯಾಗವು ನಮಗೆಲ್ಲರಿಗೂ ಭರಿಸಲಾಗದ ನಷ್ಟವನ್ನುಂಟು ಮಾಡಿದೆ. ಮಾರ್ಗದರ್ಶಕರಾಗಿ ನಮಗೆಲ್ಲ ಪ್ರೇರಣೆ ನೀಡುತ್ತಲೇ ಶ್ರೀಗಳು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಆದರೆ, ಅವರ ಆತ್ಮವು ಸಮಸ್ತ ಸಮಾಜಕ್ಕೆ ಸದಾ ಚೈತನ್ಯ ತುಂಬುತ್ತಲೇ ಇರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸಿದ್ಧಗಂಗಾ ಮಠವು ದಿನನಿತ್ಯ ಸಹಸ್ರಾರು ಮಕ್ಕಳಿಗೆ ಅನ್ನದಾನ ಮತ್ತು ವಿದ್ಯಾದಾನ ಮಾಡುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದೆ. ಅದೆಲ್ಲದರ ಪ್ರೇರಕ ಶಕ್ತಿಯೇ ಶ್ರೀಗಳು. ಅವರಿಂದ ಸ್ಫೂರ್ತಿ ಪಡೆದು ನಾಡಿನಾದ್ಯಂತ ಅನೇಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು, ಅವರೆಲ್ಲರಲ್ಲೂ ಇಂದು ಅನಾಥ ಪ್ರಜ್ಞೆ ಕಾಡುತ್ತಿದೆ. ನಾನು ಕೂಡ ಉತ್ತಮ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
‘ನನ್ನ ಜೀವನವೇ ನನ್ನ ಸಂದೇಶ’ ಎನ್ನುವಂತೆ ಬದುಕಿದ ಶ್ರೀಗಳು ಕಾಯಕ ಯೋಗಿಯಾಗಿ ಬಸವಣ್ಣನವರ ಆದರ್ಶಗಳನ್ನು ಸ್ವತಃ ಮೈಗೂಡಿಸಿಕೊಂಡಿದ್ದರು. ಅವರು ಲಿಂಗೈಕ್ಯರಾಗಿದ್ದರೂ, ಅವರ ಬದುಕಿನ ದಾರಿ ಶಾಶ್ವತವಾಗಿ ಸಮಾಜಕ್ಕೆ ದಾರಿದೀಪವಾಗಿ ಉಳಿಯಲಿದೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಗಳ ಸಮಸ್ತ ಮನುಕುಲಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ‘ಭಾರತ ರತ್ನ’ ಪ್ರಶಸ್ತಿ ನೀಡಬೇಕೆಂದು ಈಗಾಗಲೇ ಪ್ರಧಾನಮಂತ್ರಿಗೆ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಪ್ರಧಾನಮಂತ್ರಿಗೆ ವಿನಂತಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.