ಕೇಜ್ರಿವಾಲ್ ಪ್ರಾಣಕ್ಕೆ ಅಪಾಯವಿದೆ: ದಿಲ್ಲಿ ಸಿಎಂ ಕಚೇರಿಗೆ ಕರೆ
ಹೊಸದಿಲ್ಲಿ,ಜ.21: ಸೋಮವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿರುವ ಕಚೇರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಕೇಜ್ರಿವಾಲ್ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನ ಗುರುತನ್ನು ಹೇಳದಿದ್ದರೂ ತಾನು ಪಶ್ಚಿಮ ದಿಲ್ಲಿಯ ವಿಕಾಸ್ಪುರಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾರೋ ದಿಲ್ಲಿ ಮುಖ್ಯಮಂತ್ರಿಯನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡುತ್ತಿದ್ದುದನ್ನು ನಾನು ಕೇಳಿಸಿಕೊಂಡೆ ಎಂದು ವ್ಯಕ್ತಿ ತಿಳಿಸಿದ್ದಾನೆ. ಕಚೇರಿಯ ಫೋನ್ನ ಕಾಲರ್ ಐಡಿ ವ್ಯವಸ್ಥೆ ಹಾಳಾಗಿದ್ದ ಕಾರಣ ಯಾವ ಸಂಖ್ಯೆಯಿಂದ ಕರೆ ಬಂದಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳ ಕಚೇರಿಯ ಫೋನ್ ಗೆ ಅಳವಡಿಸಲಾಗಿದ್ದ ಕಾಲರ್ ಐಡಿ ಕಳೆದ ವರ್ಷ ಮೇಯಿಂದ ಹಾಳಾಗಿದ್ದು,
ದಿಲ್ಲಿ ಸರಕಾರದ ಸಾಮಾನ್ಯ ಆಡಳಿತ ವಿಭಾಗಕ್ಕೆ ಹಲವು ಬಾರಿ ನೆನಪು ಮಾಡಿದ್ದರೂ ಇನ್ನೂ ಅದನ್ನು ಸರಿಪಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ವಾರಗಳ ಹಿಂದೆ ಕೇಜ್ರಿವಾಲ್ ಪುತ್ರಿಯನ್ನು ಅಪಹರಣ ಮಾಡುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.