ಮರೀನಾ ಬೀಚ್ನಲ್ಲಿ ಜಯಾ ಸ್ಮಾರಕ ನಿರ್ಮಾಣ: ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
![ಮರೀನಾ ಬೀಚ್ನಲ್ಲಿ ಜಯಾ ಸ್ಮಾರಕ ನಿರ್ಮಾಣ: ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮರೀನಾ ಬೀಚ್ನಲ್ಲಿ ಜಯಾ ಸ್ಮಾರಕ ನಿರ್ಮಾಣ: ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ](https://www.varthabharati.in/sites/default/files/images/articles/2019/01/23/174292.jpg)
ಚೆನ್ನೈ,ಜ.23: ಮರೀನಾ ಬೀಚ್ ನಲ್ಲಿ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ. ಜಯಲಲಿತಾ ಅವರಿಗೆ ಸ್ಮಾರಕವನ್ನು ನಿರ್ಮಿಸುವುದರ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಅರ್ಜಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.
ದೇಸಿಯ ಮಕ್ಕಳ್ ಶಕ್ತಿ ಸಂಘಟನೆಯ ಎಂ.ಎಲ್ ರವಿ ಎಂಬವರು ಹಾಕಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಎಂ. ಸತ್ಯನಾರಾಯಣನ್ ಮತ್ತು ಪಿ.ರಾಜಮಾಣಿಕ್ಕಂ ತಿರಸ್ಕರಿಸಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಸಾರ್ವಜನಿಕ ಹಣವನ್ನು ಹೆಚ್ಚಾಗಿ ಬಳಸದಂತೆ ಮತ್ತು ವೆಚ್ಚ ಮಾಡಲಾದ ಹಣವನ್ನು ಆಕೆಯ ಆಸ್ತಿ ಅಥವಾ ಇತರ ಮೂಲಗಳಿಂದ ಮರುಪಡೆಯಲು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. ಆಸ್ತಿ ಅವ್ಯವಹಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಅಪರಾಧಿ ಎಂದು ಘೋಷಿಸಲ್ಪಡುವ ಸಾಧ್ಯತೆಯಿದ್ದ ವ್ಯಕ್ತಿಗೆ ಸ್ಮಾರಕವನ್ನು ನಿರ್ಮಿಸಬಾರದು ಎಂದು ಅರ್ಜಿದಾರರು ತನ್ನ ಮನವಿಯಲ್ಲಿ ತಿಳಿಸಿದ್ದರು.
ಕರ್ನಾಟಕ ಸರಕಾರ ಮತ್ತು ಇತರರು ಜಯಲಲಿತಾ ವಿರುದ್ಧ ದಾಖಲಿಸಿದ್ದ ದೂರಿನ ತೀರ್ಪನ್ನು ನೀಡುವುದಕ್ಕೂ ಮೊದಲು ಆಕೆ ಸಾವನ್ನಪ್ಪಿದ್ದರು. ನಂತರ ಈ ಪ್ರಕರಣವನ್ನು ಕೈಬಿಡಲಾಗಿತ್ತು. ಹಾಗಾಗಿ ಆಕೆ ಅಪರಾಧಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.