“ಮಹಿಳೆಯರಿಗಿಂತಲೂ ಕೆಟ್ಟ ನಿರ್ವಹಣೆ ತೋರಿದ ಪಿಣರಾಯಿ ವಿಜಯನ್''
ಕೇರಳ ಕಾಂಗ್ರೆಸ್ ನಾಯಕನ ವಿವಾದಾಸ್ಪದ ಹೇಳಿಕೆ
![“ಮಹಿಳೆಯರಿಗಿಂತಲೂ ಕೆಟ್ಟ ನಿರ್ವಹಣೆ ತೋರಿದ ಪಿಣರಾಯಿ ವಿಜಯನ್ “ಮಹಿಳೆಯರಿಗಿಂತಲೂ ಕೆಟ್ಟ ನಿರ್ವಹಣೆ ತೋರಿದ ಪಿಣರಾಯಿ ವಿಜಯನ್](https://www.varthabharati.in/sites/default/files/images/articles/2019/01/24/174402.jpg)
ತಿರುವನಂತಪುರಂ, ಜ.24: “ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಹಿಳೆಯರಿಗಿಂತಲೂ ಕೆಟ್ಟ ನಿರ್ವಹಣೆ ತೋರಿದ್ದಾರೆ'' ಎಂದು ಹೇಳುವ ಮೂಲಕ ಕೇರಳ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಕೆ ಸುಧಾಕರನ್ ವಿವಾದಕ್ಕೀಡಾಗಿದ್ದಾರೆ.
“ವಿಜಯನ್ ಅವರು ಎರಡು ಹೃದಯಗಳ ಮನುಷ್ಯ ಎಂದು ಸಿಪಿಎಂ ಕಾರ್ಯಕರ್ತರು ಅವರನ್ನು ಹೊಗಳುತ್ತಿದ್ದುದರಿಂದ ಅವರು ಮುಖ್ಯಮಂತ್ರಿಯಾದ ನಂತರ ಪುರುಷನಂತೆ ಏನಾದರೂ ಸಾಧಿಸುತ್ತಾರೆಂದು ಅಂದುಕೊಂಡಿದ್ದೆವು. ಆದರೆ ಅವರು ಪುರುಷನಂತೆ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ, ಮಹಿಳೆಯರಿಗಿಂತಲೂ ಅವರು ಕೆಟ್ಟದ್ದಾಗಿ ಕಾರ್ಯನಿರ್ವಹಿಸಿದ್ದಾರೆ'' ಎಂದು ಕಾಸರಗೋಡಿನಲ್ಲಿ ಪಕ್ಷ ಕಾರ್ಯಕರ್ತರ ಸಭೆಯಲ್ಲಿ ಸುಧಾಕರನ್ ಹೇಳಿದರು.
ಇದೀಗ ತಮ್ಮ `ಮಹಿಳಾ ವಿರೋಧಿ' ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ತಮ್ಮ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಕೋರುವುದಾಗಿ ಹಾಗೂ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಎಪ್ಪತ್ತು ವರ್ಷದ ಸುಧಾಕರನ್ ಈ ಹಿಂದೆ ಶಬರಿಮಲೆ ವಿವಾದದ ಬಗ್ಗೆ ಪ್ರತಿಕ್ರಿಯಿಸುತ್ತಾ ಋತುಮತಿಯರಾದ ಮಹಿಳೆಯರು ಅಶುದ್ಧರಾಗಿದ್ದಾರೆ ಹಾಗೂ ಅವರನ್ನು ಶಬರಿಮಲೆ ದೇವಳಕ್ಕೆ ಪ್ರವೇಶಿಸಲು ಅನುಮತಿಸಬಾರದು ಎಂದು ಹೇಳಿ ವಿವಾದಕ್ಕೀಡಾಗಿದ್ದರು.