ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಅಂಬೇಡ್ಕರ್ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ
ಉಡುಪಿ, ಜ.24: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯ ಕುರಿತು ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಜ.29 ಮತ್ತು 30ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಕೇತನ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿವಿ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಕೆ.ಅಭಯ್ ಕುಮಾರ್ ಅವರು ಜ.29ರ ಬೆಳಗ್ಗೆ 10:30ಕ್ಕೆ ವಿಚಾರಸಂಕಿರಣ ವನ್ನು ಉದ್ಘಾಟಿಸುವರು, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆ ವಹಿಸುವರು ಎಂದರು.
ಖ್ಯಾತ ಚಿಂತಕ ಹಾಗೂ ಧಾರವಾಡದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಸದಾಶಿವ ಮರ್ಜಿ ಅವರು ಆಶಯ ಭಾಷಣ ಮಾಡಲಿದ್ದು, ಯುವಜನ ಮತ್ತು ಕ್ರೀಡಾ ಇಲಾಖೆಯ ಪ್ರಾಂತೀಯ ನಿರ್ದೇಶಕ ಖಾದ್ರಿ ನರಸಿಂಹಯ್ಯ, ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯ ಸಂಪರ್ಕಾಧಿಕಾರಿ ಡಾ.ಗಣನಾಥ ಎಕ್ಕಾರು, ಮಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಅಪ್ಪಾಜಿ ಗೌಡ, ಮಂಗಲೂ ವಿವಿ ಎನ್ನೆಸ್ಸೆಸ್ನ ಕಾರ್ಯಕ್ರಮ ಸಂಯೋಜಕ ಪ್ರೊ.ವಿನೀತ ವಿಶೇಷ ಆಹ್ವಾನಿತರಾಗಿರುವರು ಎಂದರು.
ಮುಂದಿನ ಎರಡು ದಿನಗಳಲ್ಲಿ ಒಟ್ಟು ನಾಲ್ಕು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ವಿಚಾರಧಾರೆ ಮತ್ತು ಪ್ರಸ್ತುತ ಸಾಮಾಜಿಕ ಸಂಘರ್ಷ, ಸಮಕಾಲೀನ ರಾಜಕೀಯ ವ್ಯವಸ್ಥೆ, ಸಂವಿಧಾನದ ಆಶಯಗಳು ಹಾಗೂ ಆರ್ಥಿಕ ಸಮಾನತೆ ಸವಾಲುಗಳು ಎಂಬ ವಿಷಯಗಳ ಕುರಿತು ಅಮೃತ ಡೀಕಯ್ಯ, ಜಿ.ರಾಜಶೇಖರ್, ಡಾ.ಮೋಹನ್ಚಂದ್ರ ಗುತ್ತಿ, ಡಾ.ಪ್ರಶಾಂತ್ ನಾಯಕ್, ಕೆ.ಫಣಿರಾಜ್, ಪ್ರೊ.ಕಿರಣ್ ಗಾಜನೂರು, ಡಾ.ದಿನೇಶ್ ಹೆಗ್ಡೆ ಹಾಗೂ ಜ್ಯೋತಿ ಚೇಳ್ಯಾರು ವಿಚಾರ ಮಂಡಿಸುವರು ಎಂದರು.
ಜ.30ರ ಬುಧವಾರ ಅಪರಾಹ್ನ 2:00ಕ್ಕೆ ಖ್ಯಾತ ಚಿಂತಕ ಬೆಂಗಳೂರಿನ ಶಿವಸುಂದರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎನ್ನೆಸ್ಸೆಸ್ನ ರಾಜ್ಯ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಜೋಗಿ ಉಪಸ್ಥಿತರಿರುವರು. ಡಾ.ಅನಿಕೇತನ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ವಿವಿಧ ವಿವಿಗಳ 130ಕಕೂ ಅಧಿಕ ಎನ್ನೆಸ್ಸೆಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ನಿಕೇತನ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಎನ್ನೆಸ್ಸೆಸ್ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರವೀಣ್ ಶೆಟ್ಟಿ, ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಸುಜಯ ಕೆ.ಎಸ್., ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ದಿನೇಶ್ ಎಂ. ಉಪಸ್ಥಿತರಿದ್ದರು.







