ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನಶೀಲರಾಗಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕು: ಯಲ್ಲಮ್ಮ

ಭಟ್ಕಳ, ಜ. 24: ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನಶೀಲರಾಗಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕು. ಅವರ ಪ್ರಯತ್ನಕ್ಕೆ ಈ ಕಾರ್ಯಕ್ರಮವು ಪ್ರೇರಣೆಯಾಗಲಿ ಎಂದು ಸಮನ್ವಯಾಧಿಕಾರಿಗಳಾದ ಯಲ್ಲಮ್ಮ ಹೇಳಿದರು.
ಅವರು ಭಟ್ಕಳದ ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜಿನ ಸಭಾಭವನದಲ್ಲಿ, ದಿ ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಭಟ್ಕಳ ಇವರ ಸಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ದಾರಿ ದೀವಿಗೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಪರೀಕ್ಷಾ ಮಾರ್ಗದರ್ಶನ ಮತ್ತು ಜ್ಞಾನ ಅಂಕುರ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಎಜ್ಯುಕೇಶನ ಟ್ರಷ್ಟನ ಟ್ರಷ್ಟಿ ಮ್ಯಾನೇಜರ್ ರಾಜೇಶ ನಾಯಕ ಮತ್ತು ಪ್ರಾಂಶುಪಾಲ ವಿರೇಂದ್ರ ಶಾನಭಾಗ ಉಪಸ್ಥಿತರಿದ್ದರು.
ನಂತರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣ ಕ್ರಮಗಳ ಬಗ್ಗೆ “ಪರೀಕ್ಷೆ ಸಜಾ ಅಲ್ಲ ಮಜಾ” ಎನ್ನುವ ವಿಷಯದ ಮೇಲೆ ಮುರ್ಡೇಶ್ವರದ ಅರ್.ಎನ್.ಎಸ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ದಿಪೀಕಾ ಕಲ್ಕುರಾ, ಕಾರವಾರದ ಶ್ರೀ ಮೂರ್ತಿ ಸರ್ ಇವರು “ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯಲು ಬರೇ ಜ್ಞಾನ ಸಾಲದು, ತಂತ್ರ ಬೇಕು” ಹಾಗೂ ಸುಂದರ ಕೈ ಬರಹದ ಪ್ರಾಯೋಗಿಕ ತರಬೇತಿ ಮತ್ತು ಉಪನ್ಯಾಸ ನೀಡಿದರು. ಎಸ್ ಎಸ್ ಎಲ್ ಸಿ- ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟ ಮತ್ತು ಎಸ್ ಎಸ್ ಎಲ್ ಸಿ. ನಂತರ ಮುಂದೇನು ? ಈ ವಿಷಯದ ಕುರಿತು ಶ್ರೀ ವಿರೇಂದ್ರ ಶಾನಭಾಗ ಮಾತನಾಡಿದರು.
ಕಾರ್ಯಾಗಾರದ ಕೊನೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ವಿದ್ಯಾಭಾರತಿ ಪ್ರೌಢಶಾಲೆ ಪ್ರಥಮ, ದುರ್ಗಾಪರಮೇಶ್ವರಿ ಪ್ರೌಢಶಾಲೆ, ಅಳ್ವೆಕೋಡಿ ದ್ವಿತೀಯ ಮತ್ತು ಶಿರಾಲಿಯ ಸೇಂಟ್ ಥೋಮಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾರಾದ ಡಾ.ನರಸಿಂಹ ಮೂರ್ತಿ ಮತ್ತು ಬೆಳಕೆಯ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಡಾ ಸವಿತಾ ನಾಯಕ ಭಾಗವಹಿಸಿದ್ದರು. ತಾಲೂಕಿನ 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮ ಸಂಯೋಜಕರಾದ ಸರಕಾರಿ ಪ್ರೌಢಶಾಲೆ ಬೆಳಕೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶಿರಾಲಿ ಸ್ವಾಗತಿಸಿದರು, ಕನ್ನಡ ಉಪನ್ಯಾಸಕ ರಾಮಚಂದ್ರ ಭಟ್ ವಂದಿಸಿದರು, ಉಪನ್ಯಾಸಕಿಯರಾದ ಶ್ರೀಮಾ,ಪಲ್ಲವಿ ಮತ್ತು ನಾಗಲಕ್ಷ್ಮಿ ನಿರೂಪಿಸಿದರು.









