ಸ್ತ್ರೀವಾದ ಮನುಷ್ಯನ ಅಹಂಕಾರ ಕಳೆಯುವ ಪ್ರಕ್ರಿಯೆ: ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ
ಬೆಂಗಳೂರು, ಜ.24: ಸ್ತ್ರೀವಾದ ಎಂಬುದು ಪುರುಷ ಹಾಗೂ ಸ್ತ್ರೀ ಸೇರಿದಂತೆ ಮನುಷ್ಯನ ಅಹಂಕಾರವನ್ನು ಕಳೆಯುವ ಪ್ರಕ್ರಿಯೆ ಎಂದು ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಬಿ. ಭುವನೇಶ್ವರಿ ಸ್ಮರಣಾರ್ಥ ಸ್ಥಾಪಿಸಿರುವ ‘ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಇಡೀ ಜಗತ್ತು ತಾತ್ವಿಕ ಅರಾಜಕತೆಯಲ್ಲಿದ್ದು, ಎಲ್ಲ ವಾದಗಳು ಜೀವ ಕಳೆದುಕೊಂಡಿದ್ದ ಸಂದರ್ಭದಲ್ಲಿ ಮನುಷ್ಯ ನಾಗರಿಕತೆಯಲ್ಲಿ ಎಲ್ಲ ಒಳಗೊಳ್ಳುವಿಕೆಯನ್ನು ಜಗತ್ತಿಗೆ ನೀಡುತ್ತಿರುವುದೇ ಸ್ತ್ರೀವಾದ. ಸ್ತ್ರೀವಾದ ಎಂಬುದು ಯುದ್ಧವಲ್ಲ, ಯಾರ ಮೇಲಿನ ಗೆಲುವೂ ಅಲ್ಲ. ಅದು ಅಹಂಕಾರ ಕಳೆದುಕೊಂಡು ಅಪ್ಪಟ ಮನುಷ್ಯರಾಗುವುದು’’ ಎಂದು ಹೇಳಿದರು.
ಸೀವಾದ ಸಮಾನತೆಗಾಗಿ ಅಲ್ಲ, ನಮ್ಮ ಹೋರಾಟದ ಸ್ವಾಯತ್ತತೆಗೆ, ನಾವು ಸಮಾನರು, ನಮ್ಮ ವ್ಯಕ್ತಿತ್ವ, ಪಾತ್ರಗಳಿಗೆ ಅಧಿಕೃತತೆ ಕೇಳುತ್ತಿದ್ದೇವೆ. ಅದು ಪುರುಷ ಹಾಗೂ ಸ್ತ್ರೀ ಸೇರಿದಂತೆ ಮನುಷ್ಯನ ಅಹಂಕಾರವನ್ನು ಕಳೆಯುವ ಪ್ರಕ್ರಿಯೆ ಎಂದರು. ಹೆಣ್ಣನ್ನು ಅಬಲೆ ಎಂದು ಒಪ್ಪಿದಾಗ ಆಕೆಯ ಸಬಲೀಕರಣದ ಮಾತು ಬರುತ್ತದೆ ಎಂದ ಅವರು, ಹೆಣ್ಣಿನ ಒಳಗಿನ ಆತ್ಮಚೈತನ್ಯ, ಕುಂದದ ಜೀವನ ಪ್ರೀತಿ ಅನಾವರಣ ಆಗಬೇಕು. ಅದನ್ನು ಸಮಾಜ ಒಪ್ಪಬೇಕು ಎಂದ ಅವರು, ಮಹಿಳೆ ತನ್ನತನವನ್ನು ಕಳೆದುಕೊಂಡು ಪಾತ್ರಗಳಲ್ಲಿ ಲಯವಾಗುವುದು ಬೇಕಿಲ್ಲ ಎಂದು ತಿಳಿಸಿದರು.
ಸಿನಿಮಾ ರಂಗ ಹೆಣ್ಣನ್ನು ದುರಂತದ ಕಡೆಗೆ ತಳ್ಳುವ ಕ್ಷೇತ್ರ ಎಂದಾದರೂ, ತಮ್ಮ ಗಟ್ಟಿತನದ ಮೂಲಕ ವ್ಯಕ್ತಿತ್ವಕ್ಕೆ ಧಕ್ಕೆ ಆಗದ ರೀತಿಯಲ್ಲಿ ಎಂದೂ ಕೆಳಕ್ಕೆ ಬೀಳದ ರೀತಿಯಲ್ಲಿ ಬೆಳೆದವರು ಸರೋಜಾದೇವಿ. ಅವರು ಹೆಣ್ಣು ಎಂದರೆ ಕೇವಲ ಕುಣಿವ ಬೊಂಬೆ ಎಂದು ಭಾವಿಸಿದ್ದ ಜನರಿಗೆ ಸ್ತ್ರೀಗೂ ವ್ಯಕ್ತಿತ್ವವಿದೆ ಎಂಬುದನ್ನು ತಿಳಿಸಿಕೊಟ್ಟವರು. ನಗಣ್ಯ ಎಂಬ ಪಾತ್ರವನ್ನು ನಿರಾಕರಿಸಿ, ಹೆಣ್ಣು ಕುಟುಂಬದ ಕಣ್ಣು ಎಂಬ ಪಾತ್ರಗಳಿಗೆ ಜೀವ ತುಂಬಿದವರು ಎಂದು ನೆನಪಿಸಿಕೊಂಡರು.
ಸಾಹಿತಿ ಎ. ಪಂಕಜ ಮಾತನಾಡಿ, ಮಾತೃಭಾಷೆಯಲ್ಲಿ ಕಲಿಕೆ ಆರಂಭಿಸಿ, ಅದರೊಟ್ಟಿಗೆ ಬಹು ಭಾಷೆಯನ್ನು ಕಲಿಯಿರಿ. ಆದರೆ ತಾಯಿ ಭಾಷೆಯನ್ನು ಮರೆಯಬೇಡಿ’’ ಇದನ್ನು ನಮ್ಮ ತಾಯಂದಿರು ಮಕ್ಕಳಿಗೆ ಕಲಿಸಬೇಕಿದೆ. ಪ್ರತಿ ಮಹಿಳೆ ಮಕ್ಕಳಿಗೆ ಮಾತೃಭಾಷೆಯ ಅರ್ಥ ತಿಳಿಸಿಕೊಡಬೇಕು. ಮಹಿಳೆ ಮನಸ್ಸು ಮಾಡಿದರೆ ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯ ನಡುವೆ ಮಾತೃ ಭಾಷೆ ಉಳಿಯುವಂತೆ ಮಾಡಬಹುದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ಸರೋಜಾದೇವಿ, ಡಾ. ಮನು ಬಳಿಗಾರ್, ಗೌರವ ಕಾರ್ಯದರ್ಶಿಗಳಾದ ಡಾ. ರಾಜಶೇಖರ ಹತಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.