ವರ್ಷಕ್ಕೆ 8 ಲಕ್ಷ ರೂ. ಆದಾಯವಿದ್ದವರು ಬಡವರೇ: ತೇಜಸ್ವಿ ಯಾದವ್ ಪ್ರಶ್ನೆ
ಶೇ.10 ಮೀಸಲಾತಿಗೆ ವಿರೋಧ
ಪಾಟ್ನ, ಜ.24: ಮೇಲ್ವರ್ಗದ ಬಡವರಿಗೆ ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸಿರುವ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್, ವರ್ಷಕ್ಕೆ 8 ಲಕ್ಷ ರೂ. ಆದಾಯ ಇದ್ದವರು ಬಡವರು ಹೇಗಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ವರ್ಷಕ್ಕೆ 8 ಲಕ್ಷ ರೂ. ಒಳಗಿನ ಆದಾಯ ಇರುವ ಮೇಲ್ವರ್ಗದ ಜನರು ಶೇ.10ರ ಮೀಸಲಾತಿಯಡಿ ಬರುತ್ತಾರೆ ಎಂದು ಕೇಂದ್ರ ಸರಕಾರ ನಿರ್ಧರಿಸಿದೆ. ಅಂದರೆ ತಿಂಗಳಿಗೆ 66,666 ರೂ. ಆದಾಯ ಎಂದಾಗುತ್ತದೆ. ಈಗ, 8 ಲಕ್ಷ ರೂ. ವಾರ್ಷಿಕ ಆದಾಯ ಇರುವವರು 72,500 ರೂ. ತೆರಿಗೆ ಪಾವತಿಸಬೇಕು. ಇನ್ನು ಮುಂದೆ ಇವರೆಲ್ಲಾ ಬಡವರಾಗುತ್ತಾರೆ ಅಲ್ಲವೇ ಎಂದವರು ಪ್ರಶ್ನಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಇತರ ಹಿಂದುಳಿದ ವರ್ಗದವರು ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಏನನ್ನೂ ಮಾಡಿಲ್ಲ. ಆದರೆ ಮೇಲ್ವರ್ಗದವರಿಗೆ ಮೀಸಲಾತಿ ಒದಗಿಸುವ ನಿರ್ಧಾರವನ್ನು ಕೆಲವೇ ಗಂಟೆಗಳಲ್ಲಿ ಕಾರ್ಯಗತ ಮಾಡಿದ್ದಾರೆ ಎಂದು ಯಾದವ್ ಹೇಳಿದ್ದಾರೆ.
ಯಾವುದೇ ಅಧ್ಯಯನ, ಪರಿಶೀಲನೆ ಅಥವಾ ವಾಸ್ತವಿಕ ಪರಿಸ್ಥಿತಿಯ ಅವಲೋಕನ ನಡೆಸದೆ ಮೀಸಲಾತಿ ಕಾಯ್ದೆಯನ್ನು ಆತುರದಿಂದ ಜಾರಿಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ. ಸಂವಿಧಾನದ ಆಶಯವನ್ನು ಕೆಲವೇ ಗಂಟೆಗಳಲ್ಲಿ ಕೇಂದ್ರ ಸರಕಾರ ಬದಲಿಸಿಬಿಟ್ಟಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.