ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅನುಷ್ಠಾನ ತಡೆಗೆ ಸುಪ್ರೀಂಕೋರ್ಟ್ ನಕಾರ
ಮೀಸಲಾತಿಯ ಸಿಂಧುತ್ವ ಪರೀಕ್ಷಿಸಲಿದೆ ಉಚ್ಚ ನ್ಯಾಯಾಲಯ
![ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅನುಷ್ಠಾನ ತಡೆಗೆ ಸುಪ್ರೀಂಕೋರ್ಟ್ ನಕಾರ ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅನುಷ್ಠಾನ ತಡೆಗೆ ಸುಪ್ರೀಂಕೋರ್ಟ್ ನಕಾರ](https://www.varthabharati.in/sites/default/files/images/articles/2019/01/25/174547.jpg)
ಹೊಸದಿಲ್ಲಿ, ಜ.25: ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಶೇ.10ರಷ್ಟು ಮೀಸಲಾತಿ ಅನುಷ್ಠಾನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಮೀಸಲಾತಿಯ ಸಿಂಧುತ್ವದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿರುವ ನ್ಯಾಯಾಲಯ ಕೇಂದ್ರಕ್ಕೆ ನೋಟೀಸ್ ಜಾರಿಗೊಳಿಸಿದೆ.
ಕೇಂದ್ರ ಸರಕಾರ ಇನ್ನು ನಾಲ್ಕು ವಾರಗಳಲ್ಲಿ ಸುಪ್ರೀಂಕೋರ್ಟ್ಗೆ ಶೇ.10ರಷ್ಟು ಮೀಸಲಾತಿ ನೀಡಿರುವ ಬಗ್ಗೆ ಉತ್ತರಿಸಬೇಕಾಗಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ಆರ್ಥಿಕ ಸ್ಥಿತಿಗತಿ ಆಧರಿಸಿ ಮೀಸಲಾತಿ ನಿರ್ಧರಿಸುವ ಕ್ರಮ ಪ್ರಶ್ನಿಸಿದ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದೆ. ಒಟ್ಟು ಮೀಸಲಾತಿ ಸುಪ್ರೀಂಕೋರ್ಟ್ ನಿಗದಿಪಡಿಸಿದ ಶೇ.50ಕ್ಕಿಂತ ಮೀರುತ್ತಿದೆ ಎನ್ನುವುದನ್ನು ಉಲ್ಲೇಖಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
‘‘ನಾವು ಮೀಸಲಾತಿ ಸಿಂಧುತ್ವದ ಕುರಿತು ಪರೀಕ್ಷೆ ನಡೆಸುತ್ತೇವೆ. ಆದರೆ, ಮೀಸಲಾತಿ ಜಾರಿಗೆ ತಡೆಯೊಡ್ಡಲು ಸಾಧ್ಯವಿಲ್ಲ. ವಾದ-ವಿವಾದಗಳು ಪೂರ್ಣಗೊಂಡ ಬಳಿಕ ಮುಂದಿನ ವಿಚಾರಣೆ ನಡೆಸಲಾಗುವುದು’’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಎರಡೂ ಸದನಗಳಲ್ಲಿ ಮಂಡಿಸಲಾಗಿತ್ತು. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಗಳಿಗೆ ಸರಕಾರಿ ಕೆಲಸ ಹಾಗೂ ಉನ್ನತ ಶಿಕ್ಷಣಗಳಲ್ಲಿ ಮೀಸಲಾತಿ ಕಲ್ಪಿಸಲು ಶೇ.10ರಷ್ಟು ಮೀಸಲಾತಿಗೆ ಮಸೂದೆ ಮಂಡಿಸಲಾಗಿತ್ತು.
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಈಗಾಗಲೇ ಇದನ್ನು ಅನುಷ್ಠಾನಗೊಳಸಲಾಗಿದೆ.