‘ತಲೆ’ಇಲ್ಲದ ಸಿಬಿಐ ಈಗ ಬೆನ್ನೆಲುಬಿಲ್ಲದ ಬಿಜೆಪಿಯಾಗಿದೆ: ಮಮತಾ ಬ್ಯಾನರ್ಜಿ
![‘ತಲೆ’ಇಲ್ಲದ ಸಿಬಿಐ ಈಗ ಬೆನ್ನೆಲುಬಿಲ್ಲದ ಬಿಜೆಪಿಯಾಗಿದೆ: ಮಮತಾ ಬ್ಯಾನರ್ಜಿ ‘ತಲೆ’ಇಲ್ಲದ ಸಿಬಿಐ ಈಗ ಬೆನ್ನೆಲುಬಿಲ್ಲದ ಬಿಜೆಪಿಯಾಗಿದೆ: ಮಮತಾ ಬ್ಯಾನರ್ಜಿ](https://www.varthabharati.in/sites/default/files/images/articles/2019/01/25/174610.jpg)
ಕೋಲ್ಕತಾ,ಜ.25: ಸಿಬಿಐ ಅನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮಿತ್ರಪಕ್ಷಗಳಲ್ಲೊಂದು ಎಂದು ಶುಕ್ರವಾರ ಬಣ್ಣಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ಕೇಂದ್ರವು ದೇಶಾದ್ಯಂತ ಪ್ರತಿಪಕ್ಷಗಳಿಗೆ ಕಿರುಕುಳ ನೀಡಲು ಸಿಬಿಐ ಅನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಹೊಸ ನಿರ್ದೇಶಕರನ್ನು ಇನ್ನಷ್ಟೇ ಪಡೆಯಬೇಕಿರುವ ಸಿಬಿಐ ಅನ್ನು ‘ತಲೆಯಿಲ್ಲದ ಶರೀರ ’ಎಂದು ಬಣ್ನಿಸಿರುವ ಅವರು,ಈಗ ಅದು ಬೆನ್ನೆಲುಬಿಲ್ಲದ ಬಿಜೆಪಿಯಾಗಿದೆ ಎಂದಿದ್ದಾರೆ.
ಹೀಗೆ,ರಾಜಕೀಯ ಪ್ರತೀಕಾರ ಮುಂದುವರಿಯುತ್ತದೆ. ಬಿಜೆಪಿ ಮತ್ತು ಹಲವಾರು ಸರಕಾರಿ ಸಂಸ್ಥೆಗಳು ಸೇರಿದ ‘ಮಿತ್ರಪಕ್ಷ’ಗಳು ದೇಶಾದ್ಯಂತ ಪ್ರತಿಪಕ್ಷಗಳಿಗೆ ಕಿರುಕುಳಗಳನ್ನು ನೀಡುತ್ತವೆ ಎಂದು ಮಮತಾ ಟ್ವೀಟಿಸಿದ್ದಾರೆ.
ಬಿಜೆಪಿ ಭಯಗೊಂಡಿದೆಯೇ ಮತ್ತು ಹತಾಶ ಕ್ರಮವಾಗಿ ಈ ಏಜೆನ್ಸಿಗಳನ್ನು ಬಳಸುತ್ತಿದೆಯೇ ಎಂದು ಅವರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
2009ರಲ್ಲಿ ಗುಡ್ಗಾಂವ್ನಲ್ಲಿ ಭೂ ಹಂಚಿಕೆಯಲ್ಲಿ ಅಕ್ರಮಗಳ ಆರೋಪಗಳಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಇತರರ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಿಬಿಐ ಶುಕ್ರವಾರ ದಿಲ್ಲಿ ಮತ್ತು ಸಮೀಪದ ಪ್ರದೇಶಗಳಲ್ಲಿ ಹಲವಾರು ಕಡೆ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಮಮತಾರ ಟಿಎಂಸಿಗೆ ನಿಕಟರೆನ್ನಲಾಗಿರುವ ಬಂಗಾಳಿ ಚಿತ್ರ ನಿರ್ಮಾಪಕ ಶ್ರೀಕಾಂತ ಮೊಹ್ತಾ ಅವರನ್ನು ರೋಸ್ವ್ಯಾಲಿ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಬಂಧಿಸಿತ್ತು.