ರಾಜಕಾಲುವೆ ತೆರವು ಕಾರ್ಯಾಚರಣೆ: ಇಬ್ಬರು ಖಾಯಂ ಭೂ ಮಾಪಕರ ನೇಮಕ
ಬೆಂಗಳೂರು, ಜ.25: ರಾಜಕಾಲುವೆಗಳ ಒತ್ತುವರಿ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಖಾಯಂ ಭೂ ಮಾಪಕರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಪ್ರಭಾವಿಗಳು ಹಾಗೂ ಗಣ್ಯರ ಹೆಸರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಾಲಿಕೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು ಎಂದು ಆರೋಪಿಸಲಾಗಿತ್ತು. ಹೀಗಾಗಿ, ಸರಕಾರ ಇಬ್ಬರು ಖಾಯಂ ಭೂಮಾಪಕರನ್ನು ನಿಯೋಜಿಸಿದೆ.
ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದರಿಂದ ಭಾರೀ ಮಳೆಯಾದಾಗ ಕೆಲವು ಬಡಾವಣೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಆ ಹಿನ್ನೆಲೆಯಲ್ಲಿ ಪಾಲಿಕೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ, ಒತ್ತುವರಿಯಲ್ಲಿ ಪ್ರಭಾವಿಗಳ ಹೆಸರು ಕೇಳಿಬಂದ ಕೂಡಲೇ ನಾನಾ ಕಾರಣಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಟೀಕೆಗಳಿಗೆ ಗುರಿಯಾಗಿತ್ತು.
ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ನಗರದಲ್ಲಿ ಕಾರ್ಯಾಚರಣೆ ಆರಂಭಿಸುವುದಾಗಿ ಹೇಳಿಕೆ ನೀಡಿದ್ದರು. ಅದರ ಭಾಗವಾಗಿ ಪಾಲಿಕೆಗೆ ಸರ್ವೆ ಹಾಗೂ ಮಾರ್ಕಿಂಗ್ಗಾಗಿ ಇಬ್ಬರು ಭೂ ಮಾಪಕರನ್ನು ನೇಮಕ ಮಾಡಿದೆ. ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭವಾಗಲಿದ್ದು, ಅಧಿಕಾರಿಗಳು ಕಾರ್ಯಾಚರಣೆಯನ್ನು ನಿವೇಶನಗಳಿಗೆ ಸೀಮಿತಗೊಳಿಸುತ್ತಾರ ಅಥವಾ ಪಟ್ಟಿಯಲ್ಲಿರುವ ಅಪಾರ್ಟ್ಮೆಂಟ್, ಬೃಹತ್ ಕಟ್ಟಡಗಳನ್ನೂ ನೆಲಸಮ ಮಾಡುತ್ತಾರಾ ಎಂಬುದು ನೋಡಬೇಕಿದೆ.
ಸಂಶಯ ಮೂಡಿಸಿದ ಅಂಕಿ-ಅಂಶ: ಬಿಬಿಎಂಪಿ ವ್ಯಾಪ್ತಿಯ 800 ಕಿ.ಮೀ. ಉದ್ದದ ರಾಜಕಾಲುವೆಯ 1953 ಕಡೆ ಒತ್ತುವರಿಯಾಗಿದ್ದು, 2016ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವ ಮೊದಲೇ ಪಾಲಿಕೆ ಅಧಿಕಾರಿಗಳು 820 ಕಡೆ ತೆರವು ಕಾರ್ಯ ಕೈಗೊಂಡಿದ್ದರು. ಉಳಿದ 1,133 ಪ್ರಕರಣಗಳ ಪೈಕಿ ಎರಡು ವರ್ಷಗಳಲ್ಲಿ 571 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಿದ್ದು, 562 ಕಡೆ ತೆರವು ಬಾಕಿಯಿದೆ ಎಂದು ಸ್ವತಃ ಪಾಲಿಕೆ ಆಯುಕ್ತರು ಕೌನ್ಸಿಲ್ ಸಭೆಯಲ್ಲಿ ಹೇಳಿದ್ದರು.
ಆದರೆ, ಇತ್ತೀಚೆಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪಾಲಿಕೆ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ 2,515 ರಾಜಕಾಲುವೆ ಒತ್ತುವರಿ ಪ್ರಕರಣಗಳಿವೆ ಎಂದು ತಿಳಿಸಲಾಗಿದೆ. ಜತೆಗೆ ಈವರೆಗೆ ಕೇವಲ 428 ಪ್ರಕರಣಗಳನ್ನು ತೆರವುಗೊಳಿಸಿದ್ದು, 450 ಪ್ರಕರಣಗಳಲ್ಲಿ ಸರ್ವೇ ಪೂರ್ಣಗೊಂಡಿದೆ. 2018-19ನೇ ಸಾಲಿನಲ್ಲಿ 51 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಿದ್ದು, ಇನ್ನೂ 1637 ಪ್ರಕರಣಗಳಲ್ಲಿ ತೆರವು ಬಾಕಿಯಿದೆ ಎಂಬ ಮಾಹಿತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.