ಎನ್ಡಿಎಯಿಂದ ಹೊರಬರಲು ಹಿಂಜರಿಯೆವು: ಮಿಝೋರಾಂ ಸಿಎಂ ಘೋಷಣೆ
ಪೌರತ್ವ ಮಸೂದೆ
![ಎನ್ಡಿಎಯಿಂದ ಹೊರಬರಲು ಹಿಂಜರಿಯೆವು: ಮಿಝೋರಾಂ ಸಿಎಂ ಘೋಷಣೆ ಎನ್ಡಿಎಯಿಂದ ಹೊರಬರಲು ಹಿಂಜರಿಯೆವು: ಮಿಝೋರಾಂ ಸಿಎಂ ಘೋಷಣೆ](/images/placeholder.jpg)
ಐಝಾಲ್, ಜ.25: ಪೌರತ್ವ (ತಿದ್ದುಪಡಿ) ಮಸೂದೆಯನ್ನು ರದ್ದುಗೊಳಿಸದಿದ್ದರೆ ಬಿಜೆಪಿ ನೇತೃತ್ವದ ಎನ್ಡಿಎಯಿಂದ ಹೊರಬರಲು ಮಿಝೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಹಿಂಜರಿಯುವುದಿಲ್ಲ ಎಂದು ಮಿಝೋರಾಂ ಮುಖ್ಯಮಂತ್ರಿ ಝೊರಾಮ್ಥಂಗ ಹೇಳಿದ್ದಾರೆ. ಸಂದರ್ಭ ಬಂದರೆ ಎನ್ಡಿಎಗೆ ನೀಡಿದ ಬೆಂಬಲವನ್ನು ಹಿಂಪಡೆಯಲು ನಾವು ಹಿಂಜರಿಯೆವು ಎಂದವರು ಹೇಳಿದ್ದಾರೆ. ಬಜೆಟ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದ್ದು ಮಸೂದೆಗೆ ಸೋಲಾಗಬೇಕೆಂಬುದು ತಮ್ಮ ಇರಾದೆಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ 40 ಸ್ಥಾನಗಳಲ್ಲಿ 26 ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ಮೈತ್ರಿರಂಗದ ಸರಕಾರದ ನೇತೃತ್ವವನ್ನು ಮಿರೊ ನ್ಯಾಷನಲ್ ಫ್ರಂಟ್ ವಹಿಸಿದೆ. ರಾಜ್ಯ ಸಚಿವ ಸಂಪುಟ ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿದ್ದು, ಮಸೂದೆಗೆ ನಮ್ಮ ವಿರೋಧವಿದೆ ಎಂದು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಭೇಟಿಯಾದಾಗ ಸ್ಪಷ್ಟ ಪಡಿಸಿದ್ದೇನೆ ಎಂದವರು ತಿಳಿಸಿದ್ದಾರೆ. ಪ್ರಸ್ತಾವಿತ ಮಸೂದೆಗೆ ಮಿಝೋರಾಂನಲ್ಲಿ ವಿರೋಧ ಹೆಚ್ಚುತ್ತಿದ್ದು ಹಲವು ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಗಣರಾಜ್ಯೋತ್ಸವ ದಿನಾಚರಣೆಯ ಬಹಿಷ್ಕಾರಕ್ಕೆ ಕರೆ ನೀಡಿವೆ. ಮಸೂದೆಗೆ ಅಂಗೀಕಾರ ದೊರೆತರೆ ರಾಜ್ಯಗಳಿಗೆ ಹೊಸ ನಿವಾಸಿಗಳ ಒಳಹರಿವು ಹೆಚ್ಚಲಿದ್ದು ಜನಸಂಖ್ಯೆಯ ಸಂಯೋಜನೆಯನ್ನು ಬದಲಾಯಿಸಲಿದೆ ಎಂಬುದು ಈಶಾನ್ಯ ರಾಜ್ಯಗಳ ನಿವಾಸಿಗಳ ಆತಂಕವಾಗಿದೆ. ಗುರುವಾರ ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ಪ್ರತಿಭಟನಾ ನಿರತರು ರಾಜ್ಯಸಭಾ ಸದಸ್ಯ ಭಬಾನಂದ ಸಿಂಗ್ ನಿವಾಸದತ್ತ ರ್ಯಾಲಿ ಹೊರಟಾಗ ಅವರನ್ನು ಚದುರಿಸಲು ಪೊಲೀಸರು ಹೊಗೆಬಾಂಬ್ ಪ್ರಯೋಗಿಸಿದ್ದರು. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಸೂದೆಯ ಬಗ್ಗೆ ಚರ್ಚಿಸಲು ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಜನವರಿ 28ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ.