ಯುವ ವಕೀಲೆ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ವಕೀಲರ ಸಂಘದಿಂದ ಪ್ರತಿಭಟನೆ

ಬೆಂಗಳೂರು, ಜ.25: ಯುವ ವಕೀಲೆ ಧರಣಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ನಾರಾಯಣಪುರ ವಾರ್ಡ್ನ ಕಾಂಗ್ರೆಸ್ನ ಬಿಬಿಎಂಪಿ ಸದಸ್ಯ ವಿ.ಸುರೇಶ್ ಹಾಗೂ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಗರದ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಸ್ಟೀಸ್ ಕಮಿಟಿ ಫಾರ್ ಅಡ್ವೊಕೇಟ್ ಸಂಘ ಪ್ರತಿಭಟನೆ ನಡೆಸಿತು.
ಕಳೆದ 2018ರ ಡಿ.31ರಂದು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವ ವಕೀಲೆ ಧರಣಿ ಆತ್ಮಹತ್ಯೆಗೆ ಶರಣಾಗಿದ್ದರು. ಆಕೆ ಸಾವಿಗೆ ಎ.ನಾರಾಯಣಪುರ ವಾರ್ಡ್ನ ಬಿಬಿಎಂಪಿ ಸದಸ್ಯ ವಿ.ಸುರೇಶ್ ಕಾರಣ ಎಂದು ವಕೀಲರ ಸಂಘ ಆರೋಪಿಸಿದೆ. ಅಲ್ಲದೆ, ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ವಕೀಲರು ಆಗ್ರಹಿಸಿದರು. ಇನ್ನು ಆರೋಪಿಗಳನ್ನು ಬಂಧಿಸದ ಡಿಸಿಪಿ, ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಬೇಕು. ಅಷ್ಟೇ ಅಲ್ಲದೆ ಧರಣಿ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡುವಂತೆ ರಾಜ್ಯ ಸರಕಾರಕ್ಕೆ ವಕೀಲರು ಒತ್ತಾಯಿಸಿದರು.
ಜಾಮೀನಿಗೆ ಅರ್ಜಿ: ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯ ಸುರೇಶ್ ಮತ್ತು ಸಂಗಡಿಗರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿತು.
ನ್ಯಾಯಾಧೀಶ ಮೋಹನ್ ಪ್ರಭು ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ಪ್ರತಿವಾದಿಗಳ ಪರ ವಾದಿಸಿದ ವಕೀಲರು, ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿತು.







