ಲೋಕಸಭಾ ಚುನಾವಣೆಗೆ ನಾನೂ ಆಕಾಂಕ್ಷಿ: ಶಾಸಕ ಅಪ್ಪಚ್ಚು ರಂಜನ್
ಮಡಿಕೇರಿ, ಜ.27: ಮುಂದಿನ ಲೋಕಸಭಾ ಚುನಾವಣೆ ಸಂದರ್ಭ ಕೊಡಗು - ಮೈಸೂರು ಕ್ಷೇತ್ರದಿಂದ ತಾನು ಕೂಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶಾಸಕ ರಂಜನ್, ಈವರೆಗೂ ಅನೇಕ ಬಾರಿ ಮೈಸೂರಿನವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಹೀಗಿರುವಾಗ ಈ ಬಾರಿ ಕೊಡಗಿನವರಿಗೆ ಸ್ಪರ್ಧೆಗೆ ಅವಕಾಶ ನೀಡುವಂತೆ ಬಿಜೆಪಿ ವರಿಷ್ಟರಿಗೆ ಮನವಿ ಮಾಡಿರುವೆ. ಸ್ಪರ್ಧೆಗೆ ನಾನೂ ಕೂಡ ಆಕಾಂಕ್ಷಿಯಾಗಿರುವೆ ಎಂದು ಹೇಳಿದರು.
ಹರ್ಯಾಣ ರೆಸಾರ್ಟ್ ರಾಜಕೀಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಂಜನ್, ಮುಂದಿನ ಲೋಕಸಭಾ ಚುನಾವಣೆ ಸಂಬಂಧ ಚರ್ಚಿಸಲು ಬಿಜೆಪಿ ಶಾಸಕರು ಹರ್ಯಾಣದ ರೆಸಾರ್ಟ್ಗೆ ತೆರಳಿದ್ದರು. ಕರ್ನಾಟಕದದಿಂದ 20 ಸಂಸದರನ್ನು ಗೆಲ್ಲಿಸುವ ಗುರಿಯನ್ನು ಈ ಸಂದರ್ಭ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕರ್ನಾಟಕದ ಇತಿಹಾಸದಲ್ಲಿಯೇ ಶಾಸಕರು ಹೊಡೆದಾಡಿಕೊಂಡ ಉದಾಹರಣೆಯಿರಲಿಲ್ಲ. ಈಗ ಕಾಂಗ್ರೆಸ್ ಶಾಸಕರು ರೆಸಾರ್ಟ್ನಲ್ಲಿ ಮಾರಣಾಂತಿಕವಾಗಿ ಬಡಿದಾಡಿಕೊಂಡು ರಾಜಕೀಯಕ್ಕೇ ಮಸಿ ಬಳಿದಿರುವುದು ನಾಚಿಕೆಗೇಡು ಎಂದು ರಂಜನ್ ಟೀಕಿಸಿದರು.