ಕುಡಿಯುವ ನೀರಿನ ಸಮಸ್ಯೆ: ತಮ್ಮನ್ನೇ ಹರಾಜು ಮಾಡಲು ನಿರ್ಧರಿಸಿದ ಉತ್ತರ ಪ್ರದೇಶದ 50 ಮಂದಿ
ಹತ್ರಸ್,ಜ.26: ತಮ್ಮ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ 50 ಗ್ರಾಮಸ್ಥರು ತಮ್ಮನ್ನೇ ಹರಾಜು ಹಾಕಲು ನಿರ್ಧರಿಸಿದ ಘಟನೆ ಉತ್ತರ ಪ್ರದೇಶದ ಹತ್ರಸ್ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ನಗ್ಲ ಮಯ ಗ್ರಾಮದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆಯಿದ್ದು ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿಹೋದ ಇಪ್ಪತ್ತರ ಆಸುಪಾಸಿನ ಹರೆಯದ ಯುವಕರು ಯುವ ಸಾರ್ವಜನಿಕ ಕಲ್ಯಾಣ ಸಮಿತಿಯನ್ನು ರಚಿಸಿ ಆಮೂಲಕ ತಮ್ಮನ್ನೇ ಹರಾಜು ಹಾಕಲು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹಣದ ಕೊರತೆಯಿದೆ ಎಂದು ಆಡಳಿತ ನಡೆಸುವವರು ಹೇಳುತ್ತಿದ್ದಾರೆ. ಅದಕ್ಕಾಗಿ ಗಣರಾಜ್ಯೋತ್ಸವದಂದು ನಾವು ನಮ್ಮನ್ನೇ ಹರಾಜು ಹಾಕಿ ಹಣ ಸಂಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಈ ಯುವಕರು ತಿಳಿಸಿದ್ದಾರೆ. ಪ್ರತಿಭಟನೆಯ ನಂತರ ಹತ್ರಸ್ ಜಿಲ್ಲಾಡಳಿತ ಈ ಬಗ್ಗೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ ಎಂದು ವರದಿ ತಿಳಿಸಿದೆ.