ಸಂವಿಧಾನ ರಚನೆ ಸುಲಭದ ಕೆಲಸವಾಗಿರಲಿಲ್ಲ: ಪ್ರಿಯಾಂಕ್ ಖರ್ಗೆ
![ಸಂವಿಧಾನ ರಚನೆ ಸುಲಭದ ಕೆಲಸವಾಗಿರಲಿಲ್ಲ: ಪ್ರಿಯಾಂಕ್ ಖರ್ಗೆ ಸಂವಿಧಾನ ರಚನೆ ಸುಲಭದ ಕೆಲಸವಾಗಿರಲಿಲ್ಲ: ಪ್ರಿಯಾಂಕ್ ಖರ್ಗೆ](https://www.varthabharati.in/sites/default/files/images/articles/2019/01/26/174818.jpeg)
ಕಲಬುರಗಿ, ಜ.26: ಸಂವಿಧಾನ ರಚನೆಯು ತುಂಬಾ ಸುಲಭದ ಕೆಲಸವಾಗಿರಲಿಲ್ಲ. ಸರ್ವಧರ್ಮ, ಬೇರೆ ಬೇರೆ ಭಾಷೆ, ವಿಶಿಷ್ಟ ಆಚರಣೆಗಳನ್ನು ಪಾಲಿಸುತ್ತಿದ್ದ ದೇಶದ ವಾಸಿಗಳ ಹಕ್ಕು ಕಾಪಾಡಲು ಸಂವಿಧಾನ ರಚನೆ ಮಾಡುವ ಅವಶ್ಯಕತೆಯಿತ್ತು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ 70ನೆಯ ಗಣರಾಜ್ಯೋತ್ಸವದ ಅಂಗವಾಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಡಾ.ಬಾಬಾಸಾಹೇಬ್ ಅವರನ್ನು ಕರಡು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇಂಗ್ಲೆಂಡ್, ಜಪಾನ್, ಐರ್ಲೆಂಡ್ ಸೇರಿದಂತೆ ಹಲವಾರು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅಂಬೇಡ್ಕರ್ ಸಂವಿಧಾನದ ಕರಡು ರಚಿಸಿದರು ಎಂದರು.
ಕರಡು ರಚಿಸಿದ ಮೇಲೆ ಅದರ ಮೇಲೆ ಸುಮಾರು 114 ದಿನಗಳ ಕಾಲ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. ಭಾರತದಂತ ಸಂವಿಧಾನ ಜಗತ್ತಿನ ಯಾವ ದೇಶದಲ್ಲಿಯೂ ಅಸ್ತಿತ್ವದಲ್ಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಬಣ್ಣಿಸಿದರು.
ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಪಗತಿ ತಾಂಡಾ ಯೋಜನೆ, ಐರಾವತ, ಉನ್ನತಿ, ಸಮೃದ್ದಿ, ಪ್ರಗತಿ ಕಾಲನಿ ಹಾಗೂ ಪ್ರಬುದ್ದ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ ಯುವತಿಯರಿಗೆ, ಉದ್ದಿಮೆದಾರರಿಗೆ, ಉನ್ನತ ಶಿಕ್ಷಣ ಆಕಾಂಕ್ಷಿಗಳಿಗೆ ಆರ್ಥಿಕ ಸಹಾಯ ಹಾಗೂ ಮೂಲಭೂತ ಸೌಲಭ್ಯ ವಂಚಿತ ಕಾಲನಿಗಳ ಸಮಗ್ರ ಅಭಿವೃದ್ದಿಯನ್ನು ಈ ಯೋಜನೆಗಳ ಅನ್ವಯ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ರಾಜ್ಯದ ಸಮ್ಮಿಶ್ರ ಸರಕಾರ ಈ ಹಿಂದಿನ ಯಶಸ್ವಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬರುತ್ತಿದೆ. ಜನಪರ ಹಾಗೂ ಬಡವರ ಯೋಜನೆಗಳಾದ ಅನ್ನಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳಿಗೆ ಮತ್ತಷ್ಟು ಒತ್ತು ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ರಾಜ್ಯದ 3500 ವಿದ್ಯಾರ್ಥಿ ನಿಲಯಗಳು ಹಾಗೂ 800 ವಸತಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಮಗ್ರ ಅಭಿವೃದ್ದಿ ಮಾಡಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಕಲಬುರಗಿ ನಗರದಲ್ಲಿ 46.18 ಕೋಟಿ ರೂ.ವೆಚ್ಚದಲ್ಲಿ 5 ನೂತನ ಮಾದರಿ ವಸತಿನಿಲಯಗಳು ಹಾಗೂ ಜೇವರ್ಗಿಯಲ್ಲಿ 15.66 ಕೋಟಿ ರೂ.ವೆಚ್ಚದಲ್ಲಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸ್ಥಾಪಿಸಲಾಗುತ್ತಿದೆ. ಹೈ-ಕ ಅಭಿವೃದ್ದಿ ಮಂಡಳಿಗೆ 2017-18ರ ಸಾಲಿನಲ್ಲಿ ಒಟ್ಟು 4500 ಕೋಟಿ ರೂ.ಅನುದಾನ ಹಂಚಿಕೆಯಾಗಿದ್ದು, 2337.39 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ 2018-19 ರ ಸಾಲಿನಲ್ಲಿ 29.41 ಲಕ್ಷ ಮಾನವ ದಿನಗಳನ್ನು ನಿಗದಿಪಡಿಸಿ, 21.33 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಹಾಗೂ 1,42,590 ಜನರಿಗೆ ಉದ್ಯೋಗ ಕಲ್ಪಿಸಿ ಅವರಿಗೆ 62 ಕೋಟಿ ರೂ.ಕೂಲಿ ನೀಡಲಾಗಿದೆ ಎಂದು ಅವರು ಹೇಳಿದರು.