2015ರ ಗೋಲಿಬಾರ್ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿಯ ಬಂಧನ
![2015ರ ಗೋಲಿಬಾರ್ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿಯ ಬಂಧನ 2015ರ ಗೋಲಿಬಾರ್ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿಯ ಬಂಧನ](https://www.varthabharati.in/sites/default/files/images/articles/2019/01/27/174926.jpg)
ಚಂಡೀಗಡ, ಜ.27: ಫರೀದ್ ಕೋಟ್ ನ ಬೆಹ್ಬಲ್ ಕಲನ್ನಲ್ಲಿ 2015ರಲ್ಲಿ ನಡೆದಿದ್ದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಹಿರಿಯ ಪೊಲೀಸ್ ಅಧೀಕ್ಷಕ ಚರಣ್ಜಿತ್ ಶರ್ಮರನ್ನು ಅವರ ಹೋಶಿಯಾಪುರ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ವಿಶೇಷ ತನಿಖಾ ತಂಡ(ಸಿಟ್)ದ ಅಧಿಕಾರಿಗಳು ತಿಳಿಸಿದ್ದಾರೆ.
ರವಿವಾರ ಬೆಳಗ್ಗಿನ ಜಾವ 2:30ರ ವೇಳೆಗೆ ‘ಸಿಟ್’ ತಂಡ ಶರ್ಮರ ನಿವಾಸದ ಮೇಲೆ ದಾಳಿ ನಡೆಸಿದಾಗ ಶರ್ಮ ಮನೆಯ ಕಂಪೌಂಡ್ ಗೋಡೆ ಜಿಗಿದು ಪರಾರಿಯಾಗಲು ಯತ್ನಿಸಿದ್ದರು ಎಂದು ವರದಿಯಾಗಿದೆ. ತಮ್ಮ ಧರ್ಮಗ್ರಂಥವಾದ ಗುರುಗ್ರಂಥ ಸಾಹಿಬ್ ಅನ್ನು ಪದೇ ಪದೇ ಅಪವಿತ್ರಗೊಳಿಸುವ ಕೃತ್ಯ ನಡೆಯುತ್ತಿದೆ ಎಂದು ದೂರಿ ಸಿಖ್ ಹೋರಾಟಗಾರರು 2015ರ ಅಕ್ಟೋಬರ್ 14ರಂದು ಬೆಹ್ಬಲ್ ಕಲನ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಆಗ ಪ್ರತಿಭಟನಾಕಾರರನ್ನು ಚದುರಿಸಲು ಚರಣ್ಜಿತ್ ಶರ್ಮ ನೇತೃತ್ವದಲ್ಲಿ ಪೊಲೀಸರು ನಡೆಸಿದ್ದ ಗೋಲಿಬಾರ್ನಲ್ಲಿ ಇಬ್ಬರು ಸಿಖ್ ಯುವಕರು ಮೃತಪಟ್ಟಿದ್ದರು. ಘಟನೆಯ ತನಿಖೆಗೆ ನೇಮಿಸಲಾಗಿದ್ದ ಆಯೋಗವು ಮೋಗಾ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕರಾಗಿದ್ದ ಚರಣ್ಜಿತ್ ಶರ್ಮ, ಫಝಿಲ್ಕದ ಪೊಲೀಸ್ ಅಧೀಕ್ಷಕರಾಗಿದ್ದ ಬಿಕ್ರಮ್ಜಿತ್ ಸಿಂಗ್, ಇನ್ಸ್ಪೆಕ್ಟರ್ ಪ್ರದೀಪ್ ಸಿಂಗ್, ಎಸ್ಸೈ ಅಮರ್ಜಿತ್ ಸಿಂಗ್ರನ್ನು ದೋಷಿಗಳೆಂದು ವರದಿಯಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ 2018ರ ಆಗಸ್ಟ್ 11ರಂದು ಇವರ ವಿರುದ್ಧ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಬಳಿಕ ಚರಣ್ಜಿತ್ ಶರ್ಮರನ್ನು ಅಮಾನತುಗೊಳಿಸಿ ಕಡ್ಡಾಯ ನಿವೃತ್ತಿಗೊಳಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಶರ್ಮ ಮತ್ತು ಇತರ ಮೂವರು ಅಧಿಕಾರಿಗಳು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು ಮತ್ತು ತಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿದ ಬಳಿಕ ‘ಸಿಟ್’ ಅಧಿಕಾರಿಗಳು ಶರ್ಮರನ್ನು ಬಂಧಿಸಿದ್ದಾರೆ. ಶರ್ಮ ವಿದೇಶಕ್ಕೆ ಪಲಾಯನ ಮಾಡುವ ಯೋಜನೆ ಹಾಕಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ‘ಸಿಟ್’ 200ಕ್ಕೂ ಹೆಚ್ಚು ಮಂದಿಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರ್ಮ ಬಂಧನವನ್ನು ತೀವ್ರವಾದಿ ಸಿಖ್ ಮುಖಂಡ ಧಿಲಾನ್ ಸಿಂಗ್ ಮಾಂಡ್ ಸ್ವಾಗತಿಸಿದ್ದಾರೆ. ಪಂಜಾಬ್ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ‘ಆಪ್’ ಮುಖಂಡ ಹರ್ಪಾಲ್ ಸಿಂಗ್ ಚೀಮಾ ಬಂಧನವನ್ನು ಸ್ವಾಗತಿಸಿದ್ದಾರೆ. ಆದರೆ ಈ ರಾಜ್ಯದ ಕಾಂಗ್ರೆಸ್ ಸರಕಾರ ಈ ಪ್ರಕ್ರಿಯೆಯನ್ನು ವಿಳಂಬಗೊಳಿಸಿದೆ ಎಂದು ದೂರಿದ್ದಾರೆ.