ಪ್ರಾದೇಶಿಕ ಪಕ್ಷಗಳೆಲ್ಲ ಒಗ್ಗಟ್ಟಾದರೆ ಮೋದಿಗೆ ಸೋಲು: ಮಾಜಿ ಪ್ರಧಾನಿ ದೇವೇಗೌಡ
![ಪ್ರಾದೇಶಿಕ ಪಕ್ಷಗಳೆಲ್ಲ ಒಗ್ಗಟ್ಟಾದರೆ ಮೋದಿಗೆ ಸೋಲು: ಮಾಜಿ ಪ್ರಧಾನಿ ದೇವೇಗೌಡ ಪ್ರಾದೇಶಿಕ ಪಕ್ಷಗಳೆಲ್ಲ ಒಗ್ಗಟ್ಟಾದರೆ ಮೋದಿಗೆ ಸೋಲು: ಮಾಜಿ ಪ್ರಧಾನಿ ದೇವೇಗೌಡ](https://www.varthabharati.in/sites/default/files/images/articles/2019/01/27/174935.jpeg)
ಬೆಂಗಳೂರು, ಜ.27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳ ಒಂದು ಒಕ್ಕೂಟವನ್ನು ರಚಿಸಿ 3 ಅಂಶಗಳನ್ನು ಘೋಷಿಸುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ರವಿವಾರ ನಗರದಲ್ಲಿ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನುಷ್ಠಾನ ಯೋಗ್ಯ ಜನಪರ ಚುನಾವಣಾ ಪ್ರಣಾಳಿಕೆಯನ್ನು ರಚನೆ ಮಾಡುವುದು, ಲೋಕಸಭೆ ಚುನಾವಣೆ ಮುಗಿದ ನಂತರ ಒಕ್ಕೂಟ ಪಕ್ಷಗಳೆಲ್ಲಾ ಸೇರಿ ಮುಂದಿನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದು ಹಾಗೂ ಐದು ವರ್ಷಗಳ ಕಾಲ ರಾಷ್ಟ್ರದ ಜನತೆಗೆ ಸ್ಥಿರ ಸರಕಾರ ನೀಡುವುದು. ಈ 3 ಅಂಶಗಳನ್ನು ತಾವೇ ನಾಯಕತ್ವ ವಹಿಸಿ ಹೊಸದಿಲ್ಲಿಯಲ್ಲಿ ಘೋಷಿಸುವುದಾಗಿ ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಕೊನೆಯ ಸಂಸತ್ ಅಧಿವೇಶನ ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳ ಮುಖಂಡರು ಹೊಸದಿಲ್ಲಿಯಲ್ಲಿ ಸೇರಿ ಒಂದು ಉಪ ಸಮಿತಿಯನ್ನು ರಚಿಸಿ ಎನ್ಡಿಎಗೆ ಪರ್ಯಾಯವಾದ ಒಕ್ಕೂಟವನ್ನು ರಚನೆ ಮಾಡಿ ಲೋಕಸಭೆ ಚುನಾವಣೆ ಎದುರಿಸುವ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡುವುದಾಗಿ ಘೋಷಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಹನ್ನೊಂದು ದಿನಗಳ ಕಾಲ ಸಂಸತ್ ಅಧಿವೇಶನವನ್ನು ಕರೆದಿದ್ದಾರೆ. ಈ ಸಮಯದಲ್ಲಿ ಮಹಾಘಟಬಂಧನ್ ವೇದಿಕೆಯಲ್ಲಿ ಎನ್ಡಿಎಗೆ ಪರ್ಯಾಯ ವೇದಿಕೆ ರಚಿಸುವುದಾಗಿ ಇದೇ ವೇಳೆ ದೇವೇಗೌಡರು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸೌಧದ ಮುಂಭಾಗ ಅಧಿಕಾರ ಸ್ವೀಕರಿಸಿದ್ದರು. ರಾಷ್ಟ್ರದ ವಿವಿಧ ಪ್ರಾದೇಶಿಕ ಪಕ್ಷಗಳ 6 ಜನ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಶಿವಸೇನಾ, ಬಿಜೆಡಿಯ ನವೀನ್ ಪಟ್ನಾಯಕ್ ಹಾಗೂ ಅಕಾಲಿದಳ ನಾಯಕರು ಬಂದಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಸರಕಾರ ಮಾಡಿದ್ದೇವೆ. ಕೇರಳದಲ್ಲಿ ಎಡ ಪಕ್ಷಗಳ ಜೊತೆ ಸರಕಾರ ಮಾಡಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳ ಜೊತೆಗೆ ಹೋಗುವುದಾಗಿ ಗೌಡರು ವಿವರಿಸಿದ್ದಾರೆ.
ಪ್ರಧಾನಿ ಮೋದಿಯವರು ಕಳೆದ 5 ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದ್ದಾರೆ. ಜಾರಿಗೊಳಿಸಲಾಗದ ಅಸಾಧ್ಯವಾದ ಚುನಾವಣಾ ಪ್ರಣಾಳಿಕೆಯನ್ನು ರಾಷ್ಟ್ರದ ಜನತೆಗೆ ನೀಡಿ ಮತದಾರರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಹೀಗಾಗಿ, ಎನ್ಡಿಎಗೆ ಪರ್ಯಾಯವಾಗಿ ಒಂದು ಭದ್ರವಾದ ಒಕ್ಕೂಟ ರಚಿಸಿ ಸರಕಾರ ನೀಡುವುದು ನಮ್ಮ ಎಲ್ಲ ಪ್ರಾದೇಶಿಕ ಪಕ್ಷಗಳ ಧ್ಯೇಯವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಿಬಿಐ, ಸಿವಿಸಿ, ನ್ಯಾಯಾಂಗ ಸೇರಿದಂತೆ ಸಂವಿಧಾನ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಜನಾಭಿಪ್ರಾಯವಿದೆ. ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಸೇರಿದರೆ ಮೋದಿಯವರನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಬಹುದು ಎಂದು ಅಭಿಪ್ರಾಯಪಟ್ಟರು.
23 ಪಕ್ಷಗಳು ಬೆಂಬಲದಿಂದ ವಾಜಪೇಯಿ ಪ್ರಧಾನಿಯಾಗಿದ್ದರು
‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 10 ತಿಂಗಳ ಸರಕಾರ, ವಿ.ಪಿ.ಸಿಂಗ್ ಸರಕಾರ, ಐ.ಕೆ.ಗುಜ್ರಾಲ್ ಸರಕಾರಗಳು 5 ವರ್ಷಗಳ ಅವಧಿಗೆ ಮುನ್ನವೇ ಪತನವಾಗಿದ್ದವು. ಈ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರು ಎನ್ಡಿಎಗೆ ಪರ್ಯಾಯವಾಗಿ ಕೇಂದ್ರ ಸರಕಾರ ರಚನೆ ಆದರೆ ಅಸ್ಥಿರತೆ ಕಾಡುತ್ತಿರುತ್ತದೆ ಎಂದು ಎಲ್ಲ ಕಡೆಗೂ ಭಾಷಣ ಮಾಡುತ್ತಿದ್ದಾರೆ. ಆದರೆ, ಮೋದಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರು 23 ಪಕ್ಷಗಳ ಎನ್ಡಿಎ ನೇತೃತ್ವದಲ್ಲಿ ಪ್ರಧಾನಮಂತ್ರಿಯಾಗಿ 5 ವರ್ಷಗಳ ಕಾಲ ಸ್ಥಿರ ಸರಕಾರ ನೀಡಿದ್ದನ್ನು ಮೋದಿ ಅವರು ರಾಷ್ಟ್ರದ ಜನತೆಗೆ ಹೇಳಬೇಕು.’
ಎಚ್.ಡಿ.ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ