‘ಚಾಕ್ಲೇಟ್ ಮುಖ’ ಹೇಳಿಕೆ ಚಿತ್ರತಾರೆಯರನ್ನು ಉದ್ದೇಶಿಸಿದ್ದು,ರಾಜಕೀಯ ನಾಯಕರನ್ನಲ್ಲ
ಬಿಜೆಪಿ ನಾಯಕ ವಿಜಯವರ್ಗೀಯ ಸಮಜಾಯಿಷಿ
ಇಂದೋರ(ಮ.ಪ್ರ),ಜ.27: ತನ್ನ ‘ಚಾಕ್ಲೇಟ್ ಮುಖ’ ಹೇಳಿಕೆಯು ಭಾರೀ ರಾಜಕೀಯ ವಿವಾದವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಕೈಲಾಷ್ ವಿಜಯವರ್ಗೀಯ ಅವರು,ಭಾರೀ ವಿವಾದ ಸೃಷ್ಟಿಸಿರುವ ತನ್ನ ಆ ಹೇಳಿಕೆಯು ಬಾಲಿವುಡ್ ತಾರೆಯರನ್ನು ಉದ್ದೇಶಿಸಿತ್ತೇ ಹೊರತು ಯಾವುದೇ ರಾಜಕೀಯ ನಾಯಕರನ್ನಲ್ಲ ಎಂದು ರವಿವಾರ ಸಮಜಾಯಿಷಿ ನೀಡಿದ್ದಾರೆ.
ಇಂತಹ ಹೇಳಿಕೆಯನ್ನು ತಾನು ನೀಡಿದ್ದರೆ ಅದನ್ನು ತನ್ನ ಮಾಧ್ಯಮ ಸ್ನೇಹಿತರು ಪುನರ್ ಪರಿಶೀಲಿಸಬೇಕು. ಚಾಕ್ಲೇಟ್ ಮುಖ ಶಬ್ಧವನ್ನು ತಾನು ಬಾಲಿವುಡ್ ತಾರೆಯರಿಗಾಗಿ ಬಳಸಿದ್ದೇನೆಯೇ ಹೊರತು ರಾಜಕೀಯ ನಾಯಕರಿಗಲ್ಲ ಎಂದು ಅವರು ಹೇಳಿದರು.
ಪ್ರಿಯಾಂಕಾ ಗಾಂಧಿಯವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಗಾಗಿ ಪೂರ್ವ ಉತ್ತರ ಪ್ರದೇಶದಲ್ಲಿ ಪಕ್ಷದ ಉಸ್ತುವಾರಿಯನ್ನಾಗಿ ನೇಮಕಗೊಳಿಸಿದ್ದಕ್ಕಾಗಿ ಶನಿವಾರ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದ ವಿಜಯವರ್ಗೀಯ ಅವರು ಕಾಂಗ್ರೆಸ್ ಬಳಿ ನಾಯಕರಿಲ್ಲ. ಹೀಗಾಗಿಯೇ ಚಾಕ್ಲೆಟ್ ಮುಖಗಳನ್ನು ನೆಚ್ಚಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಬಯಸಿದ್ದಾರೆ. ಕೆಲವರು ಕರೀನಾ ಕಪೂರ್ ಹೆಸರು ಹೇಳುತ್ತಿದ್ದಾರೆ, ಇನ್ನು ಕೆಲವರು ಸಲ್ಮಾನ್ ಖಾನ್ ಗಾಗಿ ಕೇಳುತ್ತಿದ್ದಾರೆ. ಈಗ ಅವರು ಪ್ರಿಯಾಂಕಾ ಗಾಂಧಿಯವರನ್ನು ಕರೆತಂದಿದ್ದಾರೆ ಎಂದು ಹೇಳಿದ್ದರು.