ಆರು ಬೋಗಿಗಳ ಮೆಟ್ರೋ ರೈಲಿಗೆ ಸಿಎಂ ಹಸಿರು ನಿಶಾನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.28: ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ (ನಾಗಸಂದ್ರ-ಯಲಚೇನಹಳ್ಳಿ) ಆರು ಬೋಗಿಗಳ ರೈಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಮೈಸೂರು ರಸ್ತೆ-ಬೈಯಪ್ಪನಹಳ್ಳಿಯ ನೇರಳೆ ಮಾರ್ಗದಲ್ಲಿ ಈಗಾಗಲೇ ಮೂರು ಆರು ಬೋಗಿಗಳ ರೈಲುಗಳು ಸಂಚಾರ ಮಾಡುತ್ತಿವೆ. ಅದರ ಜತೆಗೆ ಇನ್ನೂ ಎರಡು ರೈಲುಗಳು ಇಂದಿನಿಂದ ಸೇರ್ಪಡೆಗೊಂಡಿದ್ದು, ಇದೀಗ ಎರಡೂ ಮಾರ್ಗಗಳಲ್ಲಿಯೂ ಆರು ಬೋಗಿಗಳ ರೈಲು ಸಂಚಾರಕ್ಕೆ ಮುಕ್ತವಾದಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮೂರು ಬೋಗಿಗಳ ಜೊತೆ ಹೆಚ್ಚುವರಿ ಮೂರು ಬೋಗಿಗಳನ್ನು ಅಳವಡಿಸುವುದರಿಂದ ದಿನನಿತ್ಯ ಮೆಟ್ರೋ ಬಳಸುವವರಿಗೆ ಹೆಚ್ಚಿನ ಉಪಯೋಗವಾಗಲಿದೆ. ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಇದರಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಹೇಳಿದರು.
ರವಿವಾರ ಎಸ್ಕಲೇಟರ್ನಿಂದ ಮಗು ಬಿದ್ದು ಮೃತಪಟ್ಟ ಪ್ರಕರಣದಲ್ಲಿ ಬಿಎಂಆರ್ಸಿಎಲ್ನಿಂದ ಲೋಪವಾಗಿಲ್ಲ. ಇದು ಅಜಾಗರೂಕತೆಯಿಂದ ನಡೆದ ಘಟನೆ. ನಾಗರಿಕರು ಜಾಗೃತರಾಗಿರಬೇಕು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.