ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ
![ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ](/images/placeholder.jpg)
ಬೆಂಗಳೂರು, ಜ.28: ಬಡವರ ನಿವೇಶನಗಳಿಗೆ ಭೂ-ಹಕ್ಕು ಪತ್ರಗಳನ್ನು ವಿತರಿಸದೆ, ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ, ನೂರಾರು ಜನರು ಆಹೋ ರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಸೋಮವಾರ ನಗರದ ಪುರಭವನದಿಂದ ಫ್ರೀಡಂ ಪಾರ್ಕ್ವರೆಗೂ ದಲಿತ ಸಂಘರ್ಷ ಸಮಿತಿ (ಸಮತಾವಾದ) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರಕಾರ ಈ ಕೂಡಲೇ, ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ(ಸಮಾತವಾದ) ಅಧ್ಯಕ್ಷ ಎಚ್.ಮಾರಪ್ಪ, ಯಲಹಂಕ ತಾಲೂಕು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯ ಸರ್ವೇ ಸಂಖ್ಯೆ 99ರಲ್ಲಿ ಫಕೀರ್ ಬಡಾವಣೆ, ಜೈ ಭೀಮ್ ನಗರದಲ್ಲಿ ಸುಮಾರು 30 ವರ್ಷಗಳಿಂದ 170 ಕ್ಕೂ ಹೆಚ್ಚು ಬಡ ದಲಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದರು.
ಈ ಸಂಬಂಧ ಇಲ್ಲಿನ ನಿವಾಸಿಗಳು 94ಸಿಸಿ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಸರಕಾರವು ನಿವೇಶನಗಳನ್ನು ಸಕ್ರಮಗೊಳಿಸುವ ಪತ್ರಗಳನ್ನು ವಿತರಿಸಿ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಕೊಂಡಪ್ಪ ಬಡಾವಣೆ ಸರ್ವೇ ಸಂಖ್ಯೆ 14/2 ರಲ್ಲಿ ಎರಡು ಎಕರೆ ಸರಕಾರಿ ಜಾಗದಲ್ಲಿ ಸುಮಾರು 30 ವರ್ಷಗಳಿಂದ 70ಕ್ಕೂ ಹೆಚ್ಚು ದಲಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, 2 ವರ್ಷಗಳ ಹಿಂದೆ ಸಕ್ರಮಗೊಳಿಸಲು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದರು.
ಅದೇ ರೀತಿ, ಚಿಕ್ಕಬೆಟ್ಟಹಳ್ಳಿ, ಹೆಬ್ಬಾಳ ಕುಂತಿ ಗ್ರಾಮ, ಮತ್ತಿಕೆರೆ, ಜಯರಾಮ್ ಕಾಲನಿ, ಹೆಗ್ಗನಹಳ್ಳಿ, ಸಿಂಗಸಂದ್ರ, ಶ್ರೀನಗರ ಗುಟ್ಟೆ ಗ್ರಾಮದ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.