ಕೇಂದ್ರ ಸರಕಾರ ಪೂರ್ಣ ಬಜೆಟ್ ಮಂಡಿಸಲು ಅಸಾಧ್ಯ: ಯಶ್ ವಂತ್ ಸಿನ್ಹಾ
![ಕೇಂದ್ರ ಸರಕಾರ ಪೂರ್ಣ ಬಜೆಟ್ ಮಂಡಿಸಲು ಅಸಾಧ್ಯ: ಯಶ್ ವಂತ್ ಸಿನ್ಹಾ ಕೇಂದ್ರ ಸರಕಾರ ಪೂರ್ಣ ಬಜೆಟ್ ಮಂಡಿಸಲು ಅಸಾಧ್ಯ: ಯಶ್ ವಂತ್ ಸಿನ್ಹಾ](https://www.varthabharati.in/sites/default/files/images/articles/2019/01/28/175186.jpg)
ಹೊಸದಿಲ್ಲಿ, ಜ. 26: ಎನ್ಡಿಎ ಸರಕಾರ ಮಧ್ಯಂತರ ಬಜೆಟ್ನಲ್ಲಿ ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸಲು, ಹಣಕಾಸು ಮಸೂದೆ ಮಂಡಿಸಲು ಅಥವಾ ನೂತನ ಸೇವೆ ಪರಿಚಯಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದು ಅಸಾಂವಿಧಾನಿಕವಾಗುತ್ತದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಯಶ್ ವಂತ್ ಸಿನ್ಹಾ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಧ್ಯಂತರ ಬಜೆಟ್ಗೆ ಬದಲು ಪೂರ್ಣ ಬಜೆಟ್ ಮಂಡಿಸುತ್ತದೆ ಎಂಬ ವರದಿಯ ನಡುವೆ ಅವರು ಈ ಹೇಳಿಕೆ ಹೊರಬಿದ್ದಿದೆ. ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ನಿರ್ಗಮಿಸುವ ಸರಕಾರ ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತದೆ. 2009ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಹಿತ ಹಲವು ಸರಕಾರಗಳು ಮಧ್ಯಂತರ ಬಜೆಟ್ನಲ್ಲಿ ನೀತಿ ಘೋಷಣೆ ಮಂಡಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಪೂರ್ಣ ಬಜೆಟ್ ಮಂಡನೆ ವಿರುದ್ಧ ಯಾವುದೇ ನಿಯಮ ಇಲ್ಲ ಎಂದು ಹೇಳುವವರು, ನಮ್ಮ ಸಂವಿಧಾನದಲ್ಲಿ ಈಗಲೂ ಕಲಂ 116 ಯಾಕೆ ಇದೆ ಎಂದು ಪ್ರಶ್ನಿಸುವುದಿಲ್ಲ ಎಂದು ಈ ಹಿಂದಿನ ಎನ್ಡಿಎ ಸರಕಾರದಲ್ಲಿ ಹಣಕಾಸು ಸಚಿವಾರಾಗಿದ್ದ ಯಶ್ ವಂತ್ ಸಿನ್ಹಾ ಹೇಳಿದ್ದಾರೆ. ಮಧ್ಯಂತರ ಬಜೆಟ್ ಬದಲು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸಂಪ್ರದಾಯ ಮುರಿದು ಪೂರ್ಣ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಸರಕಾರ ಪೂರ್ಣ ಬಜೆಟ್ ಮಂಡಿಸಲಿದೆ. ಸದನದಲ್ಲಿ ಯಾವುದೇ ಸವಾಲನ್ನು ಎದುರಿಸಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.