ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಗಣರಾಜ್ಯೋತ್ಸವ
ರಿಯಾದ್, ಜ. 29: ರಿಯಾದ್ ನ ಅಲ್ ಮಾಸ್ ಸಭಾಂಗಣದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಗಣರಾಜ್ಯೋತ್ಸವ ಆಯೋಜಿಸಲಾಗಿತ್ತು. ಭಾರತದ ಹಲವು ರಾಜ್ಯಗಳ ಮುಖಂಡರುಗಳು ಮತ್ತು ಜನರು ಪಾಲ್ಗೊಂಡ ಈ ಕಾರ್ಯಕ್ರಮವನ್ನು ಏಕತಾ ಗೀತೆ ನುಡಿಸುವ ಮೂಲಕ ಆರಂಭಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ರಾಯಭಾರಿ ಕಚೇರಿಯ ಸಮುದಾಯ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ವಿಜಯ ಕುಮಾರ್ ಸಿಂಗ್ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಗಣರಾಜ್ಯೋತ್ಸವದ ಮೌಲ್ಯವನ್ನು ನೆನಪಿಸುತ್ತಾ, ವಿವಿಧ ಭಾಷೆ ಧರ್ಮ ಜಾತಿಗಳನ್ನೊಳಗೊಂಡ ದೇಶದಲ್ಲಿ ಸಮಾನತೆಯಿಂದ ಕೂಡಿದ ಐಕ್ಯತೆ ದೇಶದ ಸೊಗಸಾಗಿದೆ. ಸೌದಿ ಅರೇಬಿಯಾ ಮತ್ತು ಭಾರತದ ಸಂಬಂಧದ ಕುರಿತು ಮಾತನಾಡಿದ ಇವರು ಐಟಿ ಕ್ಷೇತ್ರಗಳಲ್ಲಿ ಮತ್ತು ಸೌದಿಯ ಅಭಿವೃದ್ದಿಯಲ್ಲಿ ಭಾರತೀಯರು ನೀಡಿದ ಕೊಡುಗೆ ಅಪಾರ. ಇಂಡಿಯನ್ ಸೋಶಿಯಲ್ ಫೋರಂನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸುತ್ತಾ, ಕಷ್ಟದಲ್ಲಿರುವ ಭಾರತೀಯ ಪ್ರಜೆಗಳ ಸೇವೆಯನ್ನು ಇದೇ ಸಂಧರ್ಭದಲ್ಲಿ ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಇಂಡಿಯನ್ ಸೋಶಿಯಲ್ ಫೋರಂ ಇದರ ಉಪಾಧ್ಯಕ್ಷ ರಶೀದ್ ಖಾನ್ ಸಭಿಕರನ್ನುದ್ದೇಶಿಸಿ ಕಷ್ಟದಲ್ಲಿರುವ ಭಾರತೀಯ ಪ್ರಜೆಗಳಿಗಾಗಿನ ಸೇವೆಯಲ್ಲಿ ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಅನಿವಾಸಿ ಭಾರತೀಯರಲ್ಲಿ ಕೇಳಿಕೊಂಡರು. ದಿಕ್ಸೂಚಿ ಭಾಷಣ ಮಾಡಿದ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್, ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರಾದ ಮೊಹಮ್ಮದ್ ನವೀದ್ ಗಣರಾಜ್ಯೋತ್ಸವ ದಿನದ ಸಂದೇಶವನ್ನು ಸವಿಸ್ತಾರವಾಗಿ ವಿವರಿಸಿದರು. ವೈವಿಧ್ಯತೆಯಲ್ಲಿ ಏಕತೆ ಎಂಬ ಪರಿಕಲ್ಪನೆಯ ಆಧಾರದ ಮೇಲೆ ಭಾರತವನ್ನು ರಚಿಸಲಾಗಿದೆ ಮತ್ತು ಅದನ್ನು ಕಾಪಾಡುವ ಜವಾಬ್ದಾರಿ ಪ್ರತೀ ಭಾರತೀಯರದ್ದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ನದೀಮ್ ತರೀನ್ (ಮುಖ್ಯಸ್ಥರು, ಪಟ್ರಾನ್ ಇಂಡಿಯನ್ ಬ್ಯುಸಿನೆಸ್ ಫೋರಂ), ಇಲ್ಯಾಸ್ ತಿರೂರ್ - (ಪ್ರಾದೇಶಿಕ ಅಧ್ಯಕ್ಷರು, ಇಂಡಿಯಾ ಫೆಟರ್ನಿಟಿ ಫೋರಮ್ ರಿಯಾದ್), ಮಲಿಕ್ ಇಬ್ರಾಹಿಂ (ಅಧ್ಯಕ್ಷರು ತಮಿಳ್ ಸಂಗಮ್ ರಿಯಾದ್), ಸಜ್ಜದ್ ಸಾಹಿರ್ (ಐಎಂಸಿಸಿ ಸೌದಿ ನ್ಯಾಶನಲ್ ಕಮಿಟಿ), ಝಿಗಮ್ ಖಾನ್ (ಆಲಿಘರ್ ಅಲುಮ್ನಿ ಅಮುಬಾ), ಉಬೈದ್ ಇಡವಣ್ಣ (ಅಧ್ಯಕ್ಷರು, ಮೀಡಿಯಾ ಫೋರಮ್ ರಿಯಾದ್), ಹನೀಫ್ ಬಸ್ರೂರ್ (ಸದಸ್ಯರು, ಕಿದ್ಮ ಫೌಂಡೇಶನ್ ಉಡುಪಿ, ಕರ್ನಾಟಕ), ಅಖ್ತರುಲ್ ಇಸ್ಲಾಂ (ಸದಸ್ಯರು, ಬಿಹಾರ್ ಅಂಜುಮಾನ್) ಮತ್ತು ಇಬ್ರಾಹಿಂ ತಾರಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಕಾರಂದೂರು ಅಭಿನಂದಿಸಿ, ಅಹ್ಮದ್ ಜಾವೇದ್ ಆಂಧ್ರಪ್ರದೇಶ್ ವಂದಿಸಿದರು. ಫತ್ರುದ್ದೀನ್ ತಮಿಳುನಾಡು ಕಾರ್ಯಕ್ರಮವನ್ನು ನಿರೂಪಿಸಿದರು.