13 ಕೋಟಿ ರೂ. ದುರುಪಯೋಗ: ಎಚ್ಎಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಭುವನೇಶ್ವರ, ಜ.30: 2013ರಿಂದ 2018ರ ಅವಧಿಯಲ್ಲಿ 13 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಹಣ ದುರುಪಯೋಗ ನಡೆಸಿದ ಆರೋಪದಲ್ಲಿ ಎಚ್ಎಎಲ್ನ ಹಿರಿಯ ವ್ಯವಸ್ಥಾಪಕ ಭಾಭೆನ್ ಮೈತ್ರ ಹಾಗೂ ಇತರರ ವಿರುದ್ಧ ಸಿಬಿಐ ಐದು ಪ್ರಕರಣ ದಾಖಲಿಸಿದೆ.
ಎಚ್ಎಎಲ್ನ ಇಂಜಿನ್ ವಿಭಾಗದ (ಜಾಗೃತಿ ವಿಭಾಗ) ವ್ಯವಸ್ಥಾಪಕ ಉದಯ್ ಕುಮಾರ್ ರಾವತ್ ಅವರ ದೂರಿನ ಆಧಾರದಲ್ಲಿ ಫೈನಾನ್ಸ್/ಅಕೌಂಟ್ಸ್ ವಿಭಾಗದ ಸಹಾಯಕ ಅವಿನಾಶ್ ಕುಮಾರ್ ಸರ್ಕಾರ್ ಹಾಗೂ ಕೆಲವು ಅಧಿಕಾರಿಗಳು, ಗುತ್ತಿಗೆ ನೌಕರರು, ಕೆಲವು ಗುತ್ತಿಗೆದಾರರ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಿರುವುದಾಗಿ ಎಚ್ಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೈತ್ರರನ್ನು ಕಳೆದ ವರ್ಷ ಅಮಾನತುಗೊಳಿಸಲಾಗಿತ್ತು. 2013ರಿಂದ 2018ರವರೆಗಿನ ಲೆಕ್ಕಪತ್ರ ತಪಾಸಣೆ ಸಂದರ್ಭ 13 ಕೋಟಿ ರೂ.ಗೂ ಹೆಚ್ಚಿನ ಪಾವತಿಗೆ ಪೂರಕ ದಾಖಲೆ ಇಲ್ಲದಿರುವುದು ಬೆಳಕಿಗೆ ಬಂದಿದೆ. ಮೋಸ, ವಂಚನೆ, ಕ್ರಿಮಿನಲ್ ಒಳಸಂಚು, ಫೋರ್ಜರಿ, ಕ್ರಿಮಿನಲ್ ಅವ್ಯವಹಾರ ನಡೆಸಿರುವುದಾಗಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





