ಭಿನ್ನಾಭಿಪ್ರಾಯಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದ ಗಾಂಧೀಜಿ: ಪ್ರೊ.ಬಿ.ಕೆ.ಚಂದ್ರಶೇಖರ್
ಬೆಂಗಳೂರ, ಜ.30: ಸಾರ್ವಜನಿಕ ಜೀವನದಲ್ಲಿ ಭಿನ್ನಮತ ಎಂಬುದು ಸಾಮಾನ್ಯ ಲಕ್ಷಣವೆಂದು ನಂಬಿದ್ದ ಮಹಾತ್ಮ ಗಾಂಧೀಜಿ, ಯಾವುದೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಮುಕ್ತ ಅವಕಾಶವನ್ನು ನೀಡಿದ್ದರು ಎಂದು ಪ್ರೊ.ಬಿ.ಕೆ.ಚಂದ್ರಶೇಖರ್ ಅಭಿಪ್ರಾಯಿಸಿದರು.
ಬುಧವಾರ ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಸರ್ವೋದಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು ಎಲ್ಲರ ಹಕ್ಕು ಎಂಬುದನ್ನು ಗಾಂಧೀಜಿಯವರಿಂದ ಕಲಿಯಬೇಕು ಎಂದು ಹೇಳಿದರು.
ಪ್ರಭುತ್ವದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಮಾತ್ರಕ್ಕೆ ರಾಷ್ಟ್ರರೋಧಿ ಎಂದು ಹಣೆಪಟ್ಟಿ ಹಚ್ಚುವ ಇವತ್ತಿನ ಪ್ರವೃತ್ತಿಯನ್ನು ಖಂಡಿಸಿದ ಅವರು, ಮನುಷ್ಯ, ಪ್ರಕೃತಿ ಮತ್ತು ಅಭಿವೃದ್ಧಿಯ ನಡುವಿರುವ ಸಂಬಂಧದ ಕುರಿತು ಗಾಂಧೀಜಿ ಮಂಡಿಸಿದ ಪರಿಕಲ್ಪನೆಯನ್ನು ಇಂದು ಸಮಗ್ರವಾಗಿ ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಪರಿಪೂರ್ಣ ರಾಜಕಾರಣಿಯಾಗಿದ್ದ ಮಹಾತ್ಮ ಗಾಂಧೀಜಿ ಆಧ್ಯಾತ್ಮಿಕತೆ ಹಾಗೂ ಆತ್ಮಶಕ್ತಿ ಬೆರೆತ ಸಮಗ್ರ ಬದಲಾವಣೆಯನ್ನು ತರಬಲ್ಲ ರಾಜಕಾರಣವನ್ನು ರೂಪಿಸಲೆತ್ನಿಸಿದರು. ಸ್ವಾತಂತ್ರ ಹೋರಾಟದ ಆರಂಭದ ಘಟ್ಟದಲ್ಲಿ ಇಡೀ ಭಾರತೀಯ ಜನತೆಯನ್ನು ಒಗ್ಗೂಡಿಸುವ ಶಕ್ತಿ ಗಾಂಧೀಜಿಯವರಲ್ಲಿ ಮಾತ್ರ ಇತ್ತು ಎಂದು ಅವರು ತಿಳಿಸಿದರು.
ಸಾಂಪ್ರದಾಯಿಕ ಸಮಾಜದಲ್ಲಿ ತಮ್ಮ ಕುಟುಂಬಗಳಿಗೆ ಸೀಮಿತವಾಗಿದ್ದ ಮಹಿಳೆಯರನ್ನು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿದವರು ಗಾಂಧೀಜಿ. ಇಂತಹ ಪ್ರಯತ್ನಗಳ ಕಾರಣದಿಂದಾಗಿ ಇಂದು ಮಹಿಳಾ ಸಮುದಾಯ ಎಲ್ಲ ರಂಗದಲ್ಲೂ ಮುಂಚೂಣಿ ಸ್ಥಾನದಲ್ಲಿ ಕಾಣುವಂತಾಗಿದೆ ಎಂದು ಜೈನ್ ವಿಶ್ವವಿದ್ಯಾಲಯದ ಡೀನ್ ಡಾ. ಮೈಥಿಲಿ ಪಿ.ರಾವ್ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಾಜವಿಜ್ಞಾನಿ ಪ್ರೊ.ಟಿ.ಆರ್. ಚಂದ್ರಶೇಖರ್ ಮಾತನಾಡಿ, ಗಾಂಧೀಜಿ ಮತ್ತು ಬಸವಣ್ಣನವರ ನಡುವೆ ಇರುವ ಸಾಮ್ಯತೆ ಇದ್ದು, ಕಳೆದ ಹಲವು ದಶಕಗಳಲ್ಲಿ ಗಾಂಧಿ ಮಾದರಿಯ ಅಭಿವೃದ್ಧಿಯ ಪರಿಕಲ್ಪನೆಗಳಿಂದ ದೂರ ಬಂದ ಭಾರತ ದುರಂತದತ್ತ ಸಾಗಿದೆ. ಅಭಿವೃದ್ಧಿ ಮತ್ತು ಅಹಿಂಸೆ ಎರಡೂ ಒಟ್ಟಿಗೆ ಸಾಗದಿದ್ದರೆ ಭಾರತದ ಭವಿಷ್ಯ ಗಂಡಾಂತರಕ್ಕೆ ಸಿಲುಕಲಿದೆ ಎಂದು ಅವರು ಆಂತಕ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಬಿ.ಕೆ.ರವಿ ಮತ್ತು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನಟರಾಜ್ ಹುಳಿಯಾರ್ ಹಾಜರಿದ್ದರು.







