ಹೋಮಿಯೋಪಥಿ ಕಲಿಕೆಗೆ ಸೂಕ್ತ ವಾತಾವರಣ ಸಿದ್ಧವಾಗಲಿ: ವಜುಬಾಯಿ ವಾಲಾ
![ಹೋಮಿಯೋಪಥಿ ಕಲಿಕೆಗೆ ಸೂಕ್ತ ವಾತಾವರಣ ಸಿದ್ಧವಾಗಲಿ: ವಜುಬಾಯಿ ವಾಲಾ ಹೋಮಿಯೋಪಥಿ ಕಲಿಕೆಗೆ ಸೂಕ್ತ ವಾತಾವರಣ ಸಿದ್ಧವಾಗಲಿ: ವಜುಬಾಯಿ ವಾಲಾ](/images/placeholder.jpg)
ಬೆಂಗಳೂರು, ಜ.31: ರಾಜ್ಯದಲ್ಲಿ ಹೋಮಿಯೋಪಥಿ ಶಿಕ್ಷಣದ ಕಲಿಕೆಗೆ ಸೂಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರಕಾರ ವಿಶೇಷ ಗಮನ ವಹಿಸಬೇಕೆಂದು ರಾಜ್ಯಪಾಲ ವಜುಬಾಯಿ ವಾಲಾ ಆಶಿಸಿದರು.
ಗುರುವಾರ ಗಾಂಧಿ ಭವನ ಸಭಾಂಗಣದಲ್ಲಿ ಕರ್ನಾಟಕ ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಶನ್ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಹಾಗೂ ನೂತನ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೋಮಿಯೋಪಥಿ ಒಳ್ಳೆಯ ವೈದ್ಯ ಪದ್ಧತಿಯಾಗಿದೆ. ಆದರೆ, ನಮ್ಮಲ್ಲಿ ಹೋಮಿಯೋಪಥಿ ಕಲಿಕೆಗೆ ಒಳ್ಳೆಯ ವಾತಾವರಣ ಇಲ್ಲವಾಗಿದ್ದು, ವಿದ್ಯಾರ್ಥಿಗಳು ಕಲಿಕೆಗಾಗಿ ಹೊರ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂಬ ಆರೋಪಗಳಿವೆ. ಈ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತಿಸಿ ಆದ್ಯತೆ ಮೇರೆಗೆ ಹೋಮಿಯೋಪಥಿ ಕಲಿಕೆಗೆ ಸೂಕ್ತ ವಾತಾವರಣ ನಿರ್ಮಾಣ ಮಾಡಬೇಕೆಂದು ಅವರು ಹೇಳಿದರು.
ಮನುಷ್ಯ ಆರ್ಥಿಕವಾಗಿ ಎಷ್ಟೆ ಸಂಪತ್ತು ಗಳಿಸಿದರೂ ಜೀವನಕ್ಕೆ ಅತ್ಯಮೂಲ್ಯವಾಗಿದ್ದು ಆರೋಗ್ಯ ಸಂಪತ್ತು ಎಂದ ಅವರು, ಹಳೆಯ ಕಾಲದಲ್ಲಿ ಹಿರಿಯರು ಮನೆಯಲ್ಲಿಯೇ ಔಷಧ ತಯಾರಿಸಿ ಗುಣಮುಖರಾಗುತ್ತಿದ್ದರು. ಅದರಂತೆಯೇ ಇಂದಿನ ದಿನಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಯಾವುದೇ ಇಂಜಕ್ಷನ್, ಆಪರೇಶನ್ಗಳಿಲ್ಲದೆ ರೋಗಗಳಿಂದ ಗುಣಮುಖ ಆಗಬಹುದು ಎಂದು ಅವರು ಹೇಳಿದರು.
ಹೋಮಿಯೋಪಥಿ ಕೇಂದ್ರ ಕೌನ್ಸಿಲ್ ಮಾಜಿ ಅಧ್ಯಕ್ಷ ಡಾ.ಎಸ್.ಪಿ.ಎಸ್.ಭಕ್ಷಿ ಮಾತನಾಡಿ, ಹಳ್ಳಿಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ ಬಗ್ಗೆ ಜನರಿಗೆ ಹೆಚ್ಚು ಪರಿಚಯವಿಲ್ಲ. ಈ ಚಿಕಿತ್ಸೆಯಲ್ಲಿ ರೋಗಿ-ರೋಗ ಎರಡನ್ನು ಅಧ್ಯಯನ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮ, ಅಲರ್ಜಿ, ಥೈರಾಯಿಡ್ ಸಮಸ್ಯೆಗಳು, ಮೂಲವ್ಯಾದಿ ಹಾಗೂ ಇನ್ನಿತರ ರೋಗಗಳಿಗೆ ಯಾವುದೇ ಇಂಜಕ್ಷನ್, ಆಪರೇಶನ್ ಇಲ್ಲದೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಡಾ.ವೀರಬ್ರಹ್ಮಚಾರಿ ಮಾತನಾಡಿ, ಹೋಮಿಯೋಪಥಿಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ. ಇಂತಹ ವೈದ್ಯ ಪದ್ಧತಿ ರಾಜ್ಯದಲ್ಲಿ ವಿಸ್ತಾರಗೊಳ್ಳಬೇಕು. ಇದಕ್ಕಾಗಿ ರಾಜ್ಯ ಸರಕಾರದ ಉತ್ತರ ಕರ್ನಾಟಕ ಭಾಗದಲ್ಲಿ ಹೋಮಿಯೋಪಥಿ ಮಹಾವಿದ್ಯಾಲಯ ಸ್ಥಾಪಿಸಬೇಕೆಂದು ಒತ್ತಾಯ ಮಾಡಿದರು. ವಿಚಾರ ಸಂಕಿರಣದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ.ನಿರಂಜನ್ ಸೇರಿದಂತೆ ಪ್ರಮುಖರಿದ್ದರು.