ದೇಶಾದ್ಯಂತ ಹೆಚ್ಚುತ್ತಿರುವ ಪೆಟ್ರೋಲ್ ಪಂಪ್ ಮಿತಿ ಪರಿಶೀಲಿಸಲು ಹಸಿರು ನ್ಯಾಯಾಧಿಕರಣ ನಿರ್ದೇಶ
![ದೇಶಾದ್ಯಂತ ಹೆಚ್ಚುತ್ತಿರುವ ಪೆಟ್ರೋಲ್ ಪಂಪ್ ಮಿತಿ ಪರಿಶೀಲಿಸಲು ಹಸಿರು ನ್ಯಾಯಾಧಿಕರಣ ನಿರ್ದೇಶ ದೇಶಾದ್ಯಂತ ಹೆಚ್ಚುತ್ತಿರುವ ಪೆಟ್ರೋಲ್ ಪಂಪ್ ಮಿತಿ ಪರಿಶೀಲಿಸಲು ಹಸಿರು ನ್ಯಾಯಾಧಿಕರಣ ನಿರ್ದೇಶ](https://www.varthabharati.in/sites/default/files/images/articles/2019/01/31/175625.jpg)
ಹೊಸದಿಲ್ಲಿ, ಜ. 31: ದೇಶಾದ್ಯಂತ ಪೆಟ್ರೋಲ್ ಪಂಪ್ಗಳ ಸಂಖ್ಯೆ ಹೆಚ್ಚಿಸುವ ವಿಷಯದ ಕುರಿತು ಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಪೆಟ್ರೋಲಿಯಂ ಸಚಿವಾಲಯ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿದೆ ಹಾಗೂ ಈ ವಿಷಯದ ಕುರಿತು ವರದಿ ಕೋರಿದೆ.
ಕೈಗೊಂಡ ಕ್ರಮಗಳ ವರದಿಯನ್ನು ಎಪ್ರಿಲ್ 20ರ ಒಳಗೆ ಸಲ್ಲಿಸುವಂತೆ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಹಾಗೂ ನ್ಯಾಯಮೂರ್ತಿ ಎಸ್.ಪಿ. ವಾಂಗ್ಡಿ ನೇತೃತ್ವದ ಪೀಠ ನಿರ್ದೇಶಿಸಿದೆ. ಸಮಿತಿಯ ಮೊದಲ ಸಭೆ ಒಂದು ತಿಂಗಳ ಒಳಗೆ ನಡೆಯಲಿದೆ. ಈ ಸಂದರ್ಭ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಕ್ತ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಪೀಠ ಹೇಳಿದೆ. ಪ್ರಕರಣದ ವಿಚಾರಣೆಯನ್ನು ಪೀಠ ಜುಲೈ 5ಕ್ಕೆ ಮುಂದೂಡಿದೆ. ಪರಿಸರದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಹಿನ್ನೆಲೆಯಲ್ಲಿ ಪೆಟ್ರೋಲ್ ಪಂಪ್ಗಳ ಸಂಖ್ಯೆಗೆ ಮಿತಿ ಹೇರುವಂತೆ ಕೋರಿ ಜ್ಞಾನಪ್ರಕಾಶ್ ಅವರು ಮನವಿಯ ವಿಚಾರಣೆ ನಡೆಸಿದ ಪೀಠ ಈ ನಿರ್ದೇಶನ ನೀಡಿದೆ.
ಸುಸ್ಥಿರತೆ ಬಗ್ಗೆ ಯಾವುದೇ ಮಾರ್ಗಸೂಚಿ ಇಲ್ಲದೆ ಹಾಗೂ ಪರಿಸರದ ಬಗ್ಗೆ ಯಾವುದೇ ರೀತಿಯ ಕಾಳಜಿ ವಹಿಸದೆ ಅತ್ಯಧಿಕ ಸಂಖ್ಯೆಯಲ್ಲಿ ಪೆಟ್ರೋಲ್ ಪಂಪ್ಗಳನ್ನು ಆರಂಭಿಸಲಾಗುತ್ತಿದೆ ಎಂಬ ಸುದ್ದಿಯೊಂದನ್ನು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.